ಬೆಂಗಳೂರು:- ಸದಾ ಬೈಯ್ತಾ ಇದ್ದರು ಎಂಬ ಕಾರಣಕ್ಕೆ ಇಲ್ಲೋರ್ವ ಪಾಪಿ, ತಂದೆಗೆ ಚಾಕುವಿನಿಂದ ಚುಚ್ಚಿ ಕೊಲೆಗೈದ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದ ಕೆರೆ ಮುನೇಶ್ವರ ದೇವಸ್ಥಾನದ ಬಳಿ ಜರುಗಿದೆ.
ನಿವೃತ್ತ ಸೈನಿಕರಾಗಿದ್ದ ಚನ್ನಬಸವಯ್ಯ (61) ನೈಸ್ ರಸ್ತೆಯಲ್ಲಿ ಸೆಕ್ಯೂರಿಟಿ ಆಫೀಸರ್ ಆಗಿ ಕೆಲಸ ಮಾಡ್ತಿದ್ರು. ಮಗ ಅಮಿತ್ (21) ಕೆಲಸ ಕಾರ್ಯ ಇಲ್ಲದೆ ಎಣ್ಣೆ, ಡ್ರಗ್ಸ್ ಅಂತ ನಶೆಗೆ ದಾಸನಾಗಿ ತಿರುಗಾಡ್ತಿದ್ದ. ಪ್ರತಿ ದಿನ ಇದೇ ವಿಚಾರಕ್ಕೆ ಅಪ್ಪ ಮಗನ ನಡುವೆ ಗಲಾಟೆ ನಡೆಯುತ್ತಿತ್ತು. ಸೋಮವಾರವೂ ಸಹ ಇದೇ ವಿಚಾರಕ್ಕೆ ಗಲಾಟೆ ನಡೆದಿದೆ. ಅಪ್ಪ ಚನ್ನಬಸವಯ್ಯ ಮಗನಿಗೆ ಈ ಚಟದಿಂದ ಮುಕ್ತಿಹೊಂದಿ ಒಳ್ಳೆ ಬಟ್ಟೆ ಹಾಕೊಂಡು ಕೆಲಸ ಮಾಡು ಅಂತ ಬುದ್ದಿ ಹೇಳಿದ್ದಕ್ಕೆ ಅಪ್ಪನ ಮೇಲೆ ಸಿಟ್ಟಿಗೆದ್ದ ಮಗ ಅಮಿತ್, ತಂದೆ ಚನ್ನಬಸವಯ್ಯ ಎದೆಗೆ ಚಾಕುವಿನಿಂದ ಇರಿದಿದ್ದಾನೆ.
ಕೂಡಲೇ ಮನೆಯವರು ಚನ್ನಬಸವಯ್ಯರನ್ನ ಆಸ್ಪತ್ರೆಗೆ ಸೇರಿಸೋ ಕೆಲಸ ಮಾಡಿದ್ರು. ಆದರೆ ಮಾರ್ಗಮಧ್ಯೆಯೆ ಚನ್ನಬಸವಯ್ಯ ಸಾವನ್ನಪ್ಪಿದ್ದಾರೆ. ಇನ್ನು ಕೂಡಲೇ ಸ್ಥಳೀಯರು ಪೊಲೀಸ್ರಿಗೆ ಮಾಹಿತಿ ನೀಡಿದ ಹಿನ್ನೆಲೆ ಬ್ಯಾಡರಹಳ್ಳಿ ಪೊಲೀಸ್ರು, ಮಗ ಅಮಿತ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.