ಹಾವೇರಿ: ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳ ವ್ಯಕ್ತಿಯೋರ್ವರ ಕೊಲೆಯಲ್ಲಿ ಅಂತ್ಯವಾಗಿದೆ.
ಗೂಡಂಗಡಿ ಮಾಲೀಕರಾಗಿದ್ದ 55 ವರ್ಷದ ಶಿವಾಜಿರಾವ್ ಬೈರೋಜಿ ಮೃತ ವ್ಯಕ್ತಿ. ಮೊಟ್ಟೆ ಖರೀದಿ ವೇಳೆ ಹಣದ ವಿಚಾರವಾಗಿ ಉಂಟಾದ ವಾಗ್ವಾದ ತೀವ್ರಗೊಂಡು ತಳ್ಳಾಟ ಮತ್ತು ಹಲ್ಲೆಗೆ ತಿರುಗಿದೆ. ಈ ವೇಳೆ ಮಧ್ಯಪ್ರವೇಶಿಸಿದ ಶಿವಾಜಿರಾವ್ ಅವರನ್ನು ಆರೋಪಿಗಳು ನೆಲಕ್ಕೆ ಕೆಡವಿ ಕಾಲಿನಿಂದ ತುಳಿದಿದ್ದಾರೆ ಎನ್ನಲಾಗಿದೆ. ನಂತರ ಅವರು ಸ್ಥಳದಲ್ಲೇ ಪ್ರಜ್ಞೆ ತಪ್ಪಿದ್ದು, ಆಸ್ಪತ್ರೆಗೆ ಸಾಗಿಸಿದರೂ ದುರಾದಷ್ಟವಶಾತ್ ಮೃತಪಟ್ಟಿದ್ದಾರೆ.
ಘಟನೆ ಮಂಗಳವಾರ ಸಂಜೆ ಜನತಾ ಪ್ಲಾಟ್ ಪ್ರದೇಶದಲ್ಲಿ ನಡೆದಿದೆ. ಶಿವಾಜಿರಾವ್ ತಮ್ಮ ಪುತ್ರ ಭರತ್ ಜೊತೆ ಗೂಡಂಗಡಿ ನಡೆಸುತ್ತಿದ್ದರು. ಹಣದ ವಿಚಾರಕ್ಕೆ ಆರಂಭವಾದ ಜಗಳದಲ್ಲಿ ಭರತ್ ಮೇಲೂ ಹಲ್ಲೆ ನಡೆದಿದ್ದು, ಅವರು ಗಾಯಗೊಂಡಿದ್ದಾರೆ.
ಘಟನೆ ನಂತರ ನಾಲ್ವರು ಆರೋಪಿಗಳು ಪರಾರಿಯಾಗಿದ್ದರು. ಪೊಲೀಸರ ತನಿಖೆಯ ನಂತರ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿಗಾಗಿ ಶೋಧ ಮುಂದುವರಿದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ರಟ್ಟಿಹಳ್ಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.



