ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ WPL ಪಂದ್ಯದಲ್ಲಿ ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡ ಮುಖಾಮುಖಿಯಾಗಿದ್ದವು.
ಸತತ ಎರಡು ಪಂದ್ಯಗಳಿಂದ ಗೆದ್ದು ಬೀಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 4 ವಿಕೆಟ್ಗಳಿಂದ ಸೋಲಿಸುವ ಮೂಲಕ ಮುಂಬೈ ಇಂಡಿಯನ್ಸ್ ಡಬ್ಲ್ಯುಪಿಎಲ್ನಲ್ಲಿ 2ನೇ ಗೆಲುವು ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿಗೆ ಉತ್ತಮ ಆರಂಭ ಸಿಕ್ಕಿತು. ನಾಯಕಿ ಸ್ಮೃತಿ ಮಂಧಾನ ಹಾಗೂ ಡೇನಿಯಲ್ ವ್ಯಾಟ್-ಹಾಡ್ಜ್ ಮೊದಲ ವಿಕೆಟ್ಗೆ 29 ರನ್ಗಳ ಜೊತೆಯಾಟವನ್ನಾಡಿದರು. ಅದರಲ್ಲೂ ನಾಯಕಿ ಸ್ಮೃತಿ ಮಂಧಾನ ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮುಂದಾಗಿ 4 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಬಾರಿಸಿದರು. ಆದರೆ ಬೇಡದ ಶಾಟ್ ಆಡಿ ಮೂರನೇ ಓವರ್ನಲ್ಲೇ 26 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಡೇನಿಯಲ್ ವ್ಯಾಟ್ ಕೂಡ 9 ರನ್ಗಳಿಗೆ ಸುಸ್ತಾದರು.
ಆದರೆ ಮೂರನೇ ಕ್ರಮಾಂಕದಲ್ಲಿ ಬಂದ ಎಲ್ಲಿಸ್ ಪೆರ್ರಿ ಒಂದು ತುದಿಯಲ್ಲಿ ಭದ್ರವಾಗಿ ಬೇರೂರಿ ಸ್ಕೋರ್ ಬೋರ್ಡ್ ಏರಿಸಲಾರಂಭಿಸಿದರು. ಆದರೆ ಪೆರ್ರಿಗೆ ನಾಲ್ಕನೇ ಮತ್ತು ಐದನೇ ಕ್ರಮಾಂಕದಲ್ಲಿ ಬಂದ ಬ್ಯಾಟರ್ಗಳಿಂದ ಸಾಥ್ ಸಿಗಲಿಲ್ಲ. ಈ ವೇಳೆ 6ನೇ ಕ್ರಮಾಂಕದಲ್ಲಿ ಬಂದ ರಿಚಾ ಘೋಷ್, ಪೆರ್ರಿ ಜೊತೆ ಅರ್ಧಶತಕದ ಜೊತೆಯಾಟವನ್ನಾಡಿದರು. ಆದರೆ 28 ರನ್ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು.
ತಂಡದಲ್ಲಿ ಸತತ ವಿಕೆಟ್ ಪತನದ ನಡುವೆಯೂ ಎಂದಿನಂತೆ ತನ್ನ ಹೊಡಿಬಡಿ ಆಟವನ್ನು ಮುಂದುವರೆಸಿದ ಪೆರ್ರಿ ಕೇವಲ 30 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಅರ್ಧಶತಕದ ಬಳಿಕ ಇನ್ನಷ್ಟು ಉಗ್ರರೂಪ ತಾಳಿದ ಪೆರ್ರಿ ಮುಂಬೈ ಬೌಲರ್ಗಳ ಬೆವರಿಳಿಸಿದರು. ಪೆರ್ರಿ ಆರ್ಭಟ ಹೇಗಿತ್ತೆಂದರೆ, ಕೊನೆಯ 5 ಓವರ್ಗಳಲ್ಲಿ ಆರ್ಸಿಬಿ ಬರೋಬ್ಬರಿ 54 ರನ್ ಕಲೆಹಾಕಿತು. ಇಷ್ಟು ರನ್ಗಳಲ್ಲಿ ಪೆರ್ರಿ ಅವರ ಪಾಲೇ ಹೆಚ್ಚಿತ್ತು. ಅಂತಿಮವಾಗಿ 20ನೇ ಓವರ್ನ 5ನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಪೆರ್ರಿ ವಿಕೆಟ್ ಒಪ್ಪಿಸಿದರು. ಆದರೆ ಔಟಾಗುವುದಕ್ಕೂ ಮುನ್ನ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯುವ ಕೆಲಸ ಮಾಡಿದ್ದ ಪೆರ್ರಿ ಅಂತಿಮವಾಗಿ 43 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಸಹಿತ 81 ರನ್ ಕಲೆಹಾಕಿದರು. ಈ ಮೂಲಕ 7 ವಿಕೆಟ್ ನಷ್ಟಕ್ಕೆ 167 ರನ್ ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ಮುಂಬೈ 19.5 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿ ಗೆದ್ದು ಬೀಗಿತು. ನಾಯಕಿ ಹರ್ಮನ್ಪ್ರೀತ್ ಕೌರ್ (50), ಅಮನ್ಜೋತ್ ಕೌರ್ (34*) ಅಬ್ಬರದ ಆಟವಾಡಿ ತವರಿನಲ್ಲಿ ಆರ್ಸಿಬಿ ಗೆಲುವಿನ ಕನಸನ್ನು ಭಗ್ನಗೊಳಿಸಿದರು. ಬ್ಯಾಟಿಂಗ್ ಜತೆಗೆ ಬೌಲಿಂಗ್ನಲ್ಲೂ (3 ವಿಕೆಟ್) ಮಿಂಚಿದ ಅಮನ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ದೊರೆಯಿತು.