ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಡಾ ಹಗರಣದಲ್ಲಿ ಸಿದ್ದರಾಮಯ್ಯರಿಗೆ ಕ್ಲೀನ್ ಚಿಟ್ ನೀಡಿರುವದು ನಿರೀಕ್ಷಿತ ಬೆಳವಣಿಗೆ. ಲೋಕಾಯುಕ್ತ ಪೊಲೀಸರಿಂದ ತನಿಖೆಯಾದರೆ ನ್ಯಾಯ ಸಿಗದು ಎಂದು ಮೊದಲೇ ತಿಳಿದಿತ್ತು, ಈಗ ಹಾಗೆಯೇ ಆಗಿದೆ. ಆದರೆ ಇದರ ಬಗ್ಗೆ ಬಿಜೆಪಿ ಹೋರಾಟ ಮುಂದುವರೆಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ ಹೇಳಿದರು.
ಅವರು ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಲೋಕಾಯುಕ್ತದವರು ಮುಖ್ಯಮಂತ್ರಿಗಳ ಅಡಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳಾಗಿರುತ್ತಾರೆ. ಅವರಿಂದ ನ್ಯಾಯ ಸಿಗುವುದಿಲ್ಲ ಎನ್ನುವದು ಎಲ್ಲರಿಗೂ ತಿಳಿದ ವಿಷಯವೇ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಕೊಲೆ, ಸುಲಿಗೆ, ಭ್ರಷ್ಟಾಚಾರ ಮಿತಿಮೀರಿದೆ. ಉದಯಗಿರಿ ಘಟನೆ ಇದಕ್ಕೆ ಮತ್ತೊಂದು ಉದಾಹರಣೆಯಾಗಿದ್ದು, ಹಳೆಹುಬ್ಬಳ್ಳಿಯಲ್ಲಿ ನಡೆದ ಘಟನೆಯ ಕೇಸ್ ವಾಪಸ್ಸು ತೆಗೆದುಕೊಂಡ ಪರಿಣಾಮವೇ ಈ ಉದಯಗಿರಿ ಘಟನೆ ಮರುಕಳಿಸಿದ್ದು ಎಂದು ಟೀಕಿಸಿದರು.
ಡಿಸಿಎಂ ಡಿಕೆಶಿ, ಬೆಂಗಳೂರು ಟ್ರಾಫಿಕ್ ವ್ಯವಸ್ಥೆ ಬಗ್ಗೆ ಪ್ರತಿಕ್ರರಿಯಿಸುವಾಗ `ದೇವರೇ ಕಾಪಾಡಬೇಕು’ ಎನ್ನುವ ಹೇಳಿಕೆ ನೀಡಿದ್ದು, ಅವರಿಂದ ಅಧಿಕಾರ ನಿಭಾಯಿಸಲಾಗದು ಎನ್ನುವದಕ್ಕೆ ಉದಾಹರಣೆಯಾಗಿದ್ದು, ಬೆಂಗಳೂರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಇತ್ತು. ಅದನ್ನು ಸಂಪೂರ್ಣ ಹಾಳು ಮಾಡಿರುವ ಈ ಸರಕಾರದವರು, ಸರಕಾರವನ್ನು ಸಹ ದೇವರ ಕೈಯಲ್ಲಿಯೇ ಕೊಟ್ಟುಬಿಡಿ ಎಂದು ಲೇವಡಿ ಮಾಡಿದರು.
ಪ್ರಯಾಗರಾಜ್ ಕುಂಭಮೇಳದಿAದ ಹಿಂದೂಗಳು ಒಕ್ಕಟ್ಟು ಹೆಚ್ಚಲಿದೆ. ಅಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೈಗೊಂಡ ವ್ಯವಸ್ಥೆಗೆ ಇಡೀ ವಿಶ್ವವೆ ಮೆಚ್ಚುಗೆ ಸೂಚಿಸಿದೆ. ಕುಂಭಮೇಳದಲ್ಲಿ ಕೊಟ್ಯಾಂತರ ಜನರು ಪವಿತ್ರ ಸ್ನಾನ ಮಾಡಿ ಪುನೀತರಾಗಿದ್ದಾರೆ. ಇದರ ಯಶಸ್ಸು ವಿರೋಧ ಪಕ್ಷಗಳಿಗೆ ಸಹಿಸಿಕೊಳ್ಳುವದಕ್ಕಾಗದೆ ಟೀಕಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಇದ್ದರು.
ಬಿಜೆಪಿಯಲ್ಲಿ ನಡೆದಿರುವ ಎಲ್ಲ ವಿದ್ಯಮಾನಗಳಿಗೂ ಪಕ್ಷದ ಹೈಕಮಾಂಡ್ ಇತಿಶ್ರೀ ಹಾಡಲಿದೆ. ವಿಶ್ವದಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಅತಿದೊಡ್ಡ ಪಕ್ಷ ಬಿಜೆಪಿ ಆಗಿದ್ದು, ಸಣ್ಣ ಪುಟ್ಟ ಭಿನ್ನಮತಗಳು ಸಹಜ. ಶೀಘ್ರದಲ್ಲಿ ಎಲ್ಲವೂ ಸುಖಾಂತ್ಯಗೊಳ್ಳಲಿವೆ. ರಾಜ್ಯಾಧ್ಯಕ್ಷರ ಬಗ್ಗೆಯೂ ಇಷ್ಟರಲ್ಲಿಯೇ ಹೈಕಮಾಂಡ್ ನಿರ್ಧರಿಸಲಿದೆ ಎಂದು ಸಂಸದ ಜಗದೀಶ ಶೆಟ್ಟರ ಪ್ರತಿಕ್ರಿಯಿಸಿದರು.