ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಮಹಾಶಿವರಾತ್ರಿ ಜಾತ್ರಾಮಹೋತ್ಸವದ ಅಂಗವಾಗಿ ಫೆ.26ರಿಂದ 28ರವರೆಗೆ ಲೋಕೋತ್ತರ ಶಿವಪೂಜೆ, ವಿಶೇಷ ಶಿವಲಿಂಗ ಪೂಜೆ, ಲಿಂಗದೀಕ್ಷೆ, ರಥೋತ್ಸವ, ಧಾರ್ಮಿಕ ಕಾರ್ಯಕ್ರಮಗಳು, ಧರ್ಮಜಾಗೃತಿ ಸಮಾರಂಭ ಜರುಗಲಿದೆ.

Advertisement

ಈ ಕುರಿತು ಮಾಹಿತಿ ನೀಡಿದ ಮುಕ್ತಿಮಂದಿರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ಪ್ರತಿವರ್ಷದಂತೆ ಶ್ರೀ ಕ್ಷೇತ್ರದಲ್ಲಿ ಶಿವರಾತ್ರಿಯ ನಿಮಿತ್ತ ಲೋಕೋತ್ತರ ಶಿವಪೂಜೆಯು ನಡೆಯಲಿದೆ. ತ್ರಿಕೋಟಿ ಶಿವಲಿಂಗ ಸ್ಥಾಪನೆ ಕಾರ್ಯ ಭರದಿಂದ ಸಾಗಿದ ಹಿನ್ನೆಲೆಯಲ್ಲಿ ಮುಕ್ತಿಮಂದಿರದಲ್ಲಿ ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತ ಸಮೂಹ ಹರಿದು ಬರಲಿದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರ ಭಾರತದ ಯಾತ್ರಾ ಸ್ಥಳಗಳಲ್ಲಿ ಒಂದಾಗಿ ಬೆಳಗಲಿದೆ ಎಂದರು.

ಫೆ.26ರಂದು ಪ್ರಾತಃಕಾಲ ಶ್ರೀ ಜಗದ್ಗುರು ಪಂಚಾಚಾರ್ಯ ದ್ವಜಾರೋಹಣ, ಲಿಂ. ವೀರಗಂಗಾಧರ ಜಗದ್ಗುರುಗಳ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ಬೆಳಿಗ್ಗೆ 9ಕ್ಕೆ ಶಿವದೀಕ್ಷೆ, ಅಯ್ಯಾಚಾರ ಜರುಗುವುದು. ಸಂಜೆ 5ಕ್ಕೆ ಜ. ಪಂಡಿತಾರಾಧ್ಯರ ಮತ್ತು ವಿಶ್ವಾರಾಧ್ಯರ ಜಯಂತಿ ನಿಮಿತ್ತ ರಥೋತ್ಸವ ಜರುಗುವುದು. ರಾತ್ರಿ ಮಾನವ ಧರ್ಮ ಮಂಟಪದಲ್ಲಿ ಜ. ರೇಣುಕಾಚಾರ್ಯರು, ಶ್ರೀ ಜಗದ್ಗುರುಗಳವರ ಮಂಗಳಮೂರ್ತಿಗೆ ಮಹಾರುದ್ರಾಭಿಷೇಕ, ಪಟ್ಟಾಧ್ಯಕ್ಷರ ಸಡಗರದ ಮಹಾಶಿವಪೂಜೆ, ನಾಮಸ್ಮರಣೆ ಜರುಗಲಿದೆ. ಫೆ.27ಕ್ಕೆ ವಿಶೇಷ ಪೂಜಾ ಕಾರ್ಯಕ್ರಮ. ಸಂಜೆ ಶಿವ-ಪಾರ್ವತಿ ಮಹಾರಥೋತ್ಸವ, ಧರ್ಮಸಭೆ ನಡೆಯಲಿದೆ.

ಸಂಜೆ 4ಕ್ಕೆ ಬಾಳೇಹೊನ್ನೂರ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ದಿವ್ಯಸಾನ್ನಿಧ್ಯ ಮತ್ತು ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ನೇತೃತ್ವದಲ್ಲಿ ಲಿಂ. ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳ ಜನ್ಮ ಶತಮಾನೋತ್ಸವ ಹಾಗೂ ಧರ್ಮಜಾಗೃತಿ ಸಮಾರಂಭ ಜರುಗಲಿದೆ. ನೊಣವಿನಕೆರೆ, ಸುಳ್ಳ, ಬಂಕಾಪುರ, ಅಬ್ಬಿಗೇರಿ, ಬನ್ನಿಕೊಪ್ಪ, ಎಮ್ಮಿಗನೂರ, ಕಲಾದಗಿ, ಗಿರಿಸಾಗರ ಸೇರಿ ನಾಡಿನ ಹರಗುರುಚರಮೂರ್ತಿಗಳು, ಮಂತ್ರಿಗಳು, ಶಾಸಕರು, ರಾಜಕಾರಣಿಗಳು,ಗಣ್ಯಮಾನ್ಯರು ಸೇರಿ ಅಪಾರ ಭಕ್ತಸಮೂಹ ಪಾಲ್ಗೊಳ್ಳಲಿದೆ ಎಂದು ಪಟ್ಟಾಧ್ಯಕ್ಷರು ತಿಳಿಸಿದರು.

ಫೆ.28ರಂದು ಅಮವಾಸ್ಯೆ ವೃತಾಚರಣೆ, ಬೆಳಿಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳ ಕತೃ ಗದ್ದುಗೆಗೆ ಮಹಾಪೂಜಾ ಕೈಂಕರ್ಯಗಳು, ಮಧ್ಯಾಹ್ನ 12ಕ್ಕೆ ಸುಲ್ತಾನಪುರ ಗ್ರಾಮಸ್ಥರಿಂದ ವಿಶ್ವಶಕ್ತಿ ಭಾವಚಿತ್ರದ ಮೆರವಣಿಗೆ, 3ಕ್ಕೆ ಲಿಂ. ಜ.ವೀರಗಂಗಾಧರರ ಮಹಾಮಂಗಲ ಮೂರ್ತಿಯ ಅಡ್ಡಪಲ್ಲಕ್ಕಿ ಮಹೋತ್ಸವ, ಕಡುಬಿನ ಕಾಳಗ, ಅನ್ನದ ಹೊಳೆ ಹೊನ್ನಿನ ಮಳೆ ಜರುಗುವುದು.


Spread the love

LEAVE A REPLY

Please enter your comment!
Please enter your name here