ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಿಂಗದೀಕ್ಷೆಯು ಭಗವಂತನನ್ನು ಸಾಕ್ಷಾತ್ಕಾರಪಡಿಸಿಕೊಳ್ಳುವ ಚೈತನ್ಯ ಶಕ್ತಿಸಾಧನವಾಗಿದೆ. ಶ್ರೀಗುರುವಿನಿಂದ ಶಿವದೀಕ್ಷಾ ಸಂಪನ್ನರಾಗಿ ಇಷ್ಟಲಿಂಗ ಪಡೆದು ಪೂಜಿಸಿದರೆ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.
ಅವರು ಬುಧವಾರ ಮುಕ್ತಿಮಂದಿರ ಧರ್ಮ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಅಂಗವಾಗಿ ಶಿವಲಿಂಗ ಪೂಜೆ, ಜಂಗಮ ವಟುಗಳಿಗೆ ಅಯ್ಯಾಚಾರ-ಲಿಂಗದೀಕ್ಷೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಆಶೀರ್ವಚನ ನೀಡಿ, ವೀರಶೈವ ಧರ್ಮದಲ್ಲಿ ಗುರು-ಲಿಂಗ-ಜಂಗಮಕ್ಕೆ ವಿಶಿಷ್ಠ ಸ್ಥಾನಮಾನವಿದೆ. ಲಿಂಗಧಾರಣೆ, ಶಿವಪೂಜೆಯಿಂದ ಆತ್ಮಬಲ ಹೆಚ್ಚುತ್ತದೆ. ಸಮಾಜದಲ್ಲಿನ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಹಕ್ಕು ಪ್ರಾಪ್ತವಾಗುತ್ತದೆ.
ವಿಭೂತಿ, ಲಿಂಗ, ಜೋಳಿಗೆ, ದಂಢ ಇವು ಸಂಸ್ಕಾರದ ಸಂಕೇತಗಳಾಗಿವೆ. ವೀರಶೈವ ಲಿಂಗಾಯತ ಸಮಾಜದವರೆಲ್ಲರೂ ನಿತ್ಯ `ಓಂ ನಮಃ ಶಿವಾಯ’ ಶ್ರೇಷ್ಠ ಮಂತ್ರ ಪಠಣ ಮಾಡಬೇಕು. ಲಿಂ. ಗಂಗಾಧರ ಶ್ರೀಗಳು ಮಹಾಶಿವರಾತ್ರಿಗೆ ಮಾಡುತ್ತಿದ್ದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಲಿಂ. ಗಂಗಾಧರ ಜಗದ್ಗುರುಗಳ ಸಂಕಲ್ಪದಂತೆ ಕ್ಷೇತ್ರದಲ್ಲಿ ತ್ರಿಕೋಟಿಲಿಂಗ ಸ್ಥಾಪನೆ ಕಾರ್ಯ ನಡೆದಿದ್ದು, ಈ ಭಾಗದ ಶಿವಭಕ್ತರಿಗೆ ಕಾಶಿ ಕ್ಷೇತ್ರ ದರ್ಶನವಾದಂತೆ ಎಂದು ಹೇಳಿದರು.
ಲಕ್ಷ್ಮೇಶ್ವರ, ಕುಂದಗೋಳ, ಶಿಗ್ಗಾಂವ ತಾಲೂಕಿನ ಕ್ಷೇತ್ರದ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿದ್ದರು. ಅನೇಕ ಜಂಗಮ ವಟುಗಳಿಗೆ ಲಿಂಗದೀಕ್ಷೆ ಕಾರ್ಯ ನೆರವೇರಿಸಲಾಯಿತು. ಶಿವಲಿಂಗ ಪೂಜೆ, ಪ್ರಸಾದ ಸೇವೆ ನೆರವೇರಿತು.