ಮೈಸೂರು: ನಾವು ಪ್ರಶಸ್ತಿ ಕೊಟ್ರೆ ಬೇಡ ಅಂತೀರಿ, ಹಿಂದಿಯವರು ಪ್ರಶಸ್ತಿ ಕೊಟ್ರೆ ಓಡಿ ಹೋಗ್ತೀರಾ.? ಎಂದು ಪರೋಕ್ಷವಾಗಿ ನಟ ಸುದೀಪ್ ಗೆ ಮಂಡ್ಯ ಶಾಸಕ ರವಿಕುಮಾರ್ ಗಣಿಗ ಟಾಂಗ್ ಕೊಟ್ಟಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ನಿನ್ನೆ ಫಿಲಂ ಫೆಸ್ಟ್ ಉದ್ಘಾಟನೆ ಸಮಾರಂಭದ ಭಾಷಣದಲ್ಲಿ ಕನ್ನಡ ಚಲನಚಿತ್ರರಂಗದ ಕೆಲವು ನಟ-ನಟಿಯರಿಗೆ ನೇರವಾಗಿ ಎಚ್ಚರಿಕೆ ನೀಡಿದ್ದರು.
ಇದೀಗ ಮೈಸೂರಿನಲ್ಲಿ ಮಾತನಾಡಿದ ರವಿಕುಮಾರ್ ಗಣಿಗ, ನಮ್ಮ ಸರ್ಕಾರ ಪ್ರಶಸ್ತಿ ಕೊಟ್ಟರೆ ಬೇಡ ಅಂತೀರಿ. ಅದೇ ಹಿಂದಿಯವರು ಪ್ರಶಸ್ತಿ ಕೊಟ್ರೆ ಓಡಿ ಹೋಗಿ ತಗೋತೀರಿ ಎಂದು ಪರೋಕ್ಷವಾಗಿ ನಟ ಸುದೀಪ್ ಗೆ ಟಾಂಗ್ ಕೊಟ್ಟಿದ್ದಾರೆ.
ಡಿ.ಕೆ.ಶಿವಕುಮಾರ್ ಹೇಳಿರುವುದರಲ್ಲಿ ಏನೂ ತಪ್ಪಿಲ್ಲ. ಆಂಧ್ರದಲ್ಲಿ ರೇವಂತ್ ರೆಡ್ಡಿ ರೀತಿ ನಾವೂ ಮಾಡ್ಬೇಕು. ಕನ್ನಡದ ಕಾರ್ಯಕ್ರಮ ಅಂದ್ರೆ ಕನ್ನಡದ ನಟರಿಗೆ ಯಾಕೆ ಅಸಡ್ಡೆ ? ವಿಧಾನಸೌಧನ ಮುಂದೆ ನಿಮಗಾಗಿ ಕಾರ್ಯಕ್ರಮ ಮಾಡಿದ್ದೇವೆ. ಮರ್ಯಾದೆಯಿಂದ ಆಹ್ವಾನ ಕಳುಹಿಸಿದ್ರೆ ಯಾಕೆ ಬರಲ್ಲ ? ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಆಗಿದ್ದರೂ ಶಿವರಾಜ್ಕುಮಾರ್ ಬಂದಿದ್ದಾರೆ. ಇನ್ನುಳಿದವರಿಗೆ ಏನಾಗಿದೆ ? ಎಂದು ಕಿಡಿಕಾರಿದ್ದಾರೆ.
ಡಾ.ರಾಜ್ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಅವರೆಲ್ಲ ಕನ್ನಡ ರಾಜ್ಯೋತ್ಸವಕ್ಕೂ ಬರುತ್ತಿದ್ದರು. ಅಭಿಮಾನಿಗಳು ಒತ್ತು ಮೆರೆಸಿದ್ದಕ್ಕೇ ಸ್ಟಾರ್ ಗಳಾಗಿದ್ದು. ದರ್ಶನ್ ಹೊರತುಪಡಿಸಿ ಈಗಿನ ನಟರಲ್ಲಿ ಎಷ್ಟು ಜನ ಕನ್ನಡ ರಾಜ್ಯೋತ್ಸವಕ್ಕೆ ಬರ್ತಾರೆ ? ಕಾರ್ಯಕ್ರಮಕ್ಕೆ ಬರೋದು ನಿಮ್ಮ ವಿವೇಚನೆಯಾದರೆ ನಿಮ್ಮ ಸಿನಿಮಾ ನೋಡಬೇಕ ಬೇಡ್ವ ಅನ್ನೋದು ನಮ್ಮ ವಿವೇಚನೆ ಎಂದು ಹೇಳಿದ್ದಾರೆ.