ಗದಗ:- ಅಕ್ರಮ ಮರಳು ದಂಧೆಯಿಂದ ನಮ್ಮ ಜಮೀನು ಹಾಳಾಗುತ್ತೆ ಎಂದು ಪ್ರಶ್ನೆ ಮಾಡಿದ ವ್ಯಕ್ತಿಗೆ ದಂಧೆಕೋರರು ಹಲ್ಲೆ ನಡೆಸಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಶೀರನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಕೋಟೆಪ್ಪ ಮಲ್ಲಾಪುರ ಹಲ್ಲೆಗೊಳಗಾದ ವ್ಯಕ್ತಿ. ತುಂಗಭದ್ರಾ ನದಿಯಲ್ಲಿ ಮರಳು ದಂಧೆಕೋರರು ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದರು. ಲಾರಿ, ಟ್ರ್ಯಾಕ್ಟರ್ಗಳಲ್ಲಿ ಮರಳು ಸಾಗಿಸುತ್ತಿದ್ದ ದಂಧೆಕೋರರು ನದಿ ದಡದ ಜಮೀನುಗಳನ್ನು ಹಾಳು ಮಾಡುತ್ತಿದ್ದರು. ಅಕ್ರಮ ಮರಳುಗಾರಿಕೆ ನಡೆಸಿ ನದಿಯನ್ನೂ ತಮ್ಮ ಜಮೀನನ್ನೂ ಹಾಳು ಮಾಡುತ್ತಿದ್ದುದ್ದನ್ನು ಗ್ರಾಮದ ರೈತ ಕೋಟೆಪ್ಪ ಮಲ್ಲಾಪುರ ಪ್ರಶ್ನಿಸಿದ್ದಾರೆ. ಆ ಕಾರಣಕ್ಕಾಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಇದೇ ಗ್ರಾಮದವರೇ ಆದ ಗುಡದಯ್ಯ ಮಜ್ಜಗಿ ಎಂಬಾತ ಮತ್ತು ಆತನ ಸಂಗಡಿಗರು ರೈತ ಕೋಟೆಪ್ಪನ ಮೇಲೆ ದೊಣ್ಣೆ, ಕೊಡಲಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಕೋಟೆಪ್ಪ ಅವರಿಗೆ ತಲೆ, ಗುತ್ತಿಗೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನೂ ರಾತ್ರೋರಾತ್ರಿ 10 ಕ್ಕೂ ಹೆಚ್ಚು ಜನರ ಗ್ಯಾಂಗ್ ಮಾರಕಾಸ್ತ್ರಳಿಂದ ರೈತ ಕೋಟೆಪ್ಪನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದು ರೈತ ಸಮುದಾಯವೇ ಬೆಚ್ಚಿಬಿಳಿಸಿದೆ.
ಹಲ್ಲೆಯ ಸುದ್ದಿ ತಿಳಿದು ಮುಂಡರಗಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಅಕ್ರಮ ದಂಧೆಕೋರರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ ಕೇಳಿ ಬಂದಿದ್ದು, ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.