ಮಿರ್ಜಾಪುರ: ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ.
ಸಿಮೆಂಟ್ ತುಂಬಿದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಗೆ ನುಗ್ಗಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಅಪಘಾತವು ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ನಡೆದಿದೆ. ವಾರಾಣಸಿಯಿಂದ ಸೋನಭದ್ರದ ಕಡೆಗೆ ಸಿಮೆಂಟ್ ಚೀಲಗಳನ್ನು ಹೊತ್ತು ತೆರಳುತ್ತಿದ್ದ ಲಾರಿ, ಮಿರ್ಜಾಪುರದ ಹೆದ್ದಾರಿ ಬಳಿ ತಲುಪಿದಾಗ ಏಕಾಏಕಿ ಟೈರ್ ಸ್ಫೋಟಗೊಂಡಿದೆ.
ಟೈರ್ ಸ್ಫೋಟದಿಂದ ಚಾಲಕನ ನಿಯಂತ್ರಣ ತಪ್ಪಿದ ಲಾರಿ ನೇರವಾಗಿ ರಸ್ತೆ ಬದಿಯ ಮನೆಯೊಳಗೆ ನುಗ್ಗಿದೆ. ಮುಂಜಾನೆ ಸಮಯವಾಗಿದ್ದರಿಂದ ಮನೆಯಲ್ಲಿದ್ದವರು ಗಾಢ ನಿದ್ರೆಯಲ್ಲಿದ್ದರು. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಮನೆಯ ಗೋಡೆಗಳು ಕುಸಿದು, ಮಲಗಿದ್ದವರ ಮೇಲೆ ಲಾರಿ ಹರಿದಿದೆ.
ಘಟನೆಯಲ್ಲಿ ರಾಜಾರಾಮ್ (47), ಸುಖಿಯಾ (70) ಹಾಗೂ ಚಂದತಾರಾ (45) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ವೇಳೆ 12 ವರ್ಷದ ಬಾಲಕಿ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಸ್ಥಳೀಯರು ಹಾಗೂ ಪೊಲೀಸರು ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ವಾರಾಣಸಿಯ ಟ್ರಾಮಾ ಸೆಂಟರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತದ ಬಳಿಕ ಲಾರಿ ಮನೆಯೊಳಗೆ ಸಿಲುಕಿಕೊಂಡಿತ್ತು. ಪೊಲೀಸರು ಕ್ರೇನ್ ಸಹಾಯದಿಂದ ಲಾರಿಯನ್ನು ಹೊರತೆಗೆದಿದ್ದಾರೆ. ಸದ್ಯ ಲಾರಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯ ಕಾರಣವೇ ಅಥವಾ ತಾಂತ್ರಿಕ ದೋಷವೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ನಿದ್ರೆಯಲ್ಲಿದ್ದಾಗಲೇ ಒಂದೇ ಕುಟುಂಬದ ಮೂವರನ್ನು ಬಲಿ ಪಡೆದ ಈ ಘಟನೆ ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ.



