ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಆರಂಭದಿಂದಲೂ ಕಳಪೆ ಪ್ರದರ್ಶನ ತೋರುತ್ತಿದೆ. ಹೀಗಾಗಿ ತಂಡದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಲಾಗಿದೆ.
ಸತತ ಸೋಲಿಗೆ ಕಂಗೆಟ್ಟ ತಂಡ, ನಾಯಕತ್ವ ಬದಲಾವಣೆ ಮಾಡಿದೆ. ಸೋಲಿನ ಹೊಣೆ ಹೊರಿಸಿ ನಾಯಕ ಡೇವಿಡ್ ವಾರ್ನರ್ ಅವರನ್ನು ಕೆಳಗಿಳಿಸಲಾಗಿದೆ. ಈ ಕುರಿತು ಅಧಿಕೃತವಾಗಿಯೇ ತಂಡ ಘೋಷಿಸಿದೆ.
ಹೀಗಾಗಿ ಭಾನುವಾರ ನಡೆಯಲಿರುವ ಹೈದರಾಬಾದ್ ತಂಡದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಬದಲಾಗಿ ಕೇನ್ ವಿಲಿಯಮ್ಸನ್ ತಂಡದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಅಲ್ಲದೇ, ಈ ಐಪಿಎಲ್ ನ ಮುಂಬರುವ ಎಲ್ಲ ಪಂದ್ಯಗಳಲ್ಲಿಯೂ ಕೇನ್ ವಿಲಿಯಮ್ಸನ್ ನಾಯಕರಾಗಿ ಇರಲಿದ್ದಾರೆ ಎಂದು ತಂಡ ಪ್ರಕಟಣೆ ಮೂಲಕ ತಿಳಿಸಿದೆ.
ಭಾನುವಾರ(ಮೇ. 2)ದಂದು ಹೈದರಾಬಾದ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಅಲ್ಲದೇ, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ವಿದೇಶಿ ಆಟಗಾರರ ಸಂಯೋಜನೆಯಲ್ಲಿಯೂ ಬದಲಾವಣೆ ಮಾಡಿಕೊಳ್ಳಲಾಗುವುದು ಎಂದು ತಂಡ ಹೇಳಿದೆ.
ಹೈದರಾಬಾದ್ ತಂಡದ ನಾಯಕನಾಗಿ ಡೇವಿಡ್ ವಾರ್ನರ್ ಅವರು ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದಾರೆ. ಅವರ ಕೊಡುಗೆಯನ್ನು ಗೌರವ ಪೂರ್ವಕವಾಗಿ ಪರಿಗಣಿಸಲಾಗುತ್ತಿದೆ. ಮುಂದಿನ ಪಂದ್ಯಗಳನ್ನು ಎದುರಿಸುವ ಸಂದರ್ಭದಲ್ಲಿ ಅಂಗಳದಲ್ಲಿ ಹಾಗೂ ಅಂಗಳದಾಚೆಗಿನ ಯಶಸ್ಸಿಗೆ ಡೇವಿಡ್ ವಾರ್ನರ್ ಅವರಿಂದ ಸಂಪೂರ್ಣ ಸಹಕಾರ ದೊರೆಯುವ ಭರವಸೆಯಿದೆ ಎಂದು ತಂಡದ ಮ್ಯಾನೇಜ್ ಮೆಂಟ್ ತಿಳಿಸಿದೆ.



