ವಿಜಯಸಾಕ್ಷಿ ಸುದ್ದಿ, ನವದೆಹಲಿ
ದೆಹಲಿಯಲ್ಲಿ ಮತ್ತೆ ಆಮ್ಲಜನಕದ ತೊಂದರೆ ತಲೆ ದೋರಿದೆ. ಒಂದು ಗಂಟೆಯ ಕಾಲ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಕಾರಣ ವೈದ್ಯರೊಬ್ಬರು ಸೇರಿದಂತೆ 8 ಜನ ಮಹಾಮಾರಿಗೆ ಬಲಿಯಾಗಿರುವ ಘಟನೆ ನಡೆದಿದೆ.
ಈ ಕುರಿತು ದೆಹಲಿಯಲ್ಲಿನ ಬಾತ್ರಾ ಆಸ್ಪತ್ರೆ ಶನಿವಾರ ದೆಹಲಿ ಹೈಕೋರ್ಟ್ ಗೆ ಮಾಹಿತಿ ನೀಡಿದೆ.
ಬಾತ್ರಾ ಆಸ್ಪತ್ರೆ, ನಮಗೆ ಸಮಯಕ್ಕೆ ಸರಿಯಾಗಿ ಆಮ್ಲಜನಕ ದೊರೆಯಲಿಲ್ಲ. ಮಧ್ಯಾಹ್ನ 12ರ ಹೊತ್ತಿಗೆ ನಮಗೆ ಆಕ್ಸಿಜನ್ ಪೂರೈಕೆಯ ತೊಂದರೆಯಾಯಿತು. ಆದರೆ, ನಮಗೆ ಮರಳಿ ಆಕ್ಸಿಜನ್ ಸಿಕ್ಕಿದ್ದು, ಅಂದೆ ಮಧ್ಯಾಹ್ನ 1.35ಕ್ಕೆ. ಅಷ್ಟರಲ್ಲಿ ನಮ್ಮ ಒಬ್ಬರು ವೈದ್ಯರು ಸೇರಿದಂತೆ 8 ಜನ ರೋಗಿಗಳು ಸಾವನ್ನಪ್ಪಿದ್ದರು ಎಂದು ಹೈಕೋರ್ಟ್ ಗೆ ತಿಳಿಸಿದೆ.
ಆಮ್ಲಜನಕ ಪೂರೈಕೆಯಿಲ್ಲದೆ ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿದ್ದೇವೆ ಎಂದು ಬಾತ್ರಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗುಪ್ತಾ ಹೇಳಿದ್ದಾರೆ.