ವಿಜಯಸಾಕ್ಷಿ ಸುದ್ದಿ, ಗದಗ: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಉಗಳವಾಟ ಗ್ರಾಮದಲ್ಲಿ ಕುರಿಗಾಹಿಯ ಕತ್ತು ಕತ್ತರಿಸಿ ಹತ್ಯೆ ಮಾಡಿರುವದನ್ನು ಖಂಡಿಸಿ, ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ಕುರುಬ ಸಮಾಜದ ಮಹಿಳಾ ಪಿ.ಡಿ.ಓ ಮೇಲೆ ಹಲ್ಲೆ ಮತ್ತು ಕಲಬುರಗಿ ಜಿಲ್ಲೆಯ ಅಳಂದ ತಾಲೂಕಿನ ಖಾನಾಪುರ ಗ್ರಾಮದಲ್ಲಿ ಕುರುಬರಿಗೆ ಬಹಿಷ್ಕಾರ ಹಾಕಿರುವದನ್ನು ಖಂಡಿಸಿ ಗದಗ ಜಿಲ್ಲೆಯ ಕುರುಬ ಸಮುದಾಯದ ವಿವಿಧ ಸಂಘಟನೆಗಳು ಹಾಗೂ ಜಿಲ್ಲಾ ಕುರಿಗಾರರ ಸಹಕಾರಿ ಸಂಘಗಳ ಒಕ್ಕೂಟದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರದ ಟಿಪ್ಪು ವೃತ್ತದಿಂದ ಕುರುಬ ಸಮಾಜ ಬಾಂಧವರು ನೂರಾರು ಕುರಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿವರೆಗೂ ತೆರಳಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಉಗಲವಾಟ ಗ್ರಾಮದಲ್ಲಿ ಕುರಿಗಾಹಿ ಯುವಕ ಶರಣಪ್ಪ ಜಮ್ಮನಕಟ್ಟಿಯ ಮೇಲೆ ದುಷ್ಕರ್ಮಿಗಳು ಅಮಾನುಷ ಕೃತ್ಯ ಮೆರೆದು ಕತ್ತು ಸೀಳಿ ಕೊಂದು ಹಾಕಿದ್ದಾರೆ. ಭಾರತ ದೇಶದ ಸಂಸ್ಕೃತಿಗೆ ಕುರುಬರ ಕೊಡುಗೆ ದೊಡ್ಡದಿದೆ. ಮುಗ್ಧ ಕುರುಬ ಸಮುದಾಯದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಒಂದೇ ತಿಂಗಳಿನಲ್ಲಿ ಮೂರು ಪ್ರಕರಣಗಳು ನಡೆದಿವೆ.
ಬಾಗಲಕೋಟೆ ಜಿಲ್ಲೆ ಮಾತ್ರವಲ್ಲದೇ ರಾಜ್ಯಾದ್ಯಂತ ಕುರಿಗಾಹಿಗಳು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಮಳೆ, ಗಾಳಿ, ಬಿಸಿಲೆನ್ನದೇ ಊರೂರು ಸುತ್ತುವ, ಪ್ರಕೃತಿಯ ಆರಾಧಕರಾಗಿರುವ ಕುರಿಗಾಹಿಗಳಿಗೆ ರಕ್ಷಣೆಯಿಲ್ಲದಂತಾಗಿದೆ. ಅರಣ್ಯ ಇಲಾಖೆಯವರ ಮಾನಸಿಕ, ದೈಹಿಕ ಹಿಂಸೆಗಳು ಜೊತೆಗೆ ಕಳ್ಳಕಾಕರಿಂದ ಕುರಿಗಳನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ.
ಸರ್ಕಾರ ಬಜೆಟ್ನಲ್ಲಿ ಕುರಿಗಾರರಿಗೆ ಸೌಲಭ್ಯಗಳ ಘೋಷಣೆಗಳನ್ನು ಮಾಡುತ್ತಿವೆಯಾದರೂ ಕುರಿಗಾರರಿಗೆ ಅನುಕೂಲಗಳು ಮರೀಚಿಕೆಯಾಗಿವೆ. ಸರ್ಕಾರ ಕಾಯಿದೆಗಳನ್ನು ಮಾಡಿವೆ. ಆದರೆ ಯಾವುದೂ ಸಹ ಕಾರ್ಯರೂಪಕ್ಕೆ ಬರುತ್ತಿಲ್ಲ. ಕುರಿಗಾಹಿಗಳು ದೇಶದ ಆವಿಭಾಜ್ಯ ಅಂಗವಾಗಿದ್ದು, ಅವರ ಜೀವನೋಪಾಯ ಮತ್ತು ಸುರಕ್ಷತೆಗೆ ರಾಜ್ಯ ಸರ್ಕಾರದ ತುರ್ತು ಗಮನ ನೀಡಬೇಕಿದೆ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕುರುಬ ಸಮಾಜದ ಹಿರಿಯರಾದ ಫಕ್ಕೀರಪ್ಪ ಹೆಬಸೂರ, ರುದ್ರಣ್ಣ ಗುಳಗುಳಿ, ವಾಸಣ್ಣ ಕುರಡಗಿ, ರವಿ ದಂಡಿನ, ಹೇಮಂತ ಗಿಡ್ಡಹನುಮಣ್ಣವರ, ಮಂಜು ಜಡಿ, ಮುತ್ತು ಜಡಿ, ಬಸವರಾಜ ಕುರಿ, ಉಮೇಶ ಪೂಜಾರ, ರವಿ ಜೋಗಿನ, ಮಲ್ಲೇಶಪ್ಪ ಕೊಣ್ಣೂರ, ಮುತ್ತಪ್ಪ ಕುರಿ, ಕುಮಾರ ಮಾರನಬಸರಿ, ಬಸಪ್ಪ ಶಿರೂರ, ನಾರಾಯಣ ಜಡಿ, ದೇವಪ್ಪ ಮಲ್ಲಸಮುದ್ರ, ಬಸವರಾಜ ಜಡಿ, ಬರಮಲಿಂಗಪ್ಪ ಬಿಂಗಿ, ಸೋಮು ಮೇಟಿ, ಚನ್ನಪ್ಪ ಕೊಪ್ಪದ, ಮುದಿಯಪ್ಪ ಬಿಸಾವಿ, ಸಿದ್ದಲಿಂಗಪ್ಪ ಕಾಡಣವರ, ಮಂಜುನಾಥ ಹುಲ್ಲೂರು, ಎಸ್.ಎಸ್. ಹಳ್ಳಿ, ಮಲ್ಲಪ್ಪ ಓಲೆಕಾರ, ಗೋಳಪ್ಪ ಕೋತಿ, ರಮೇಶ ಮಳಲಿ, ಬಸಪ್ಪ ರೋಣದ, ಬಸವರಾಜ ಅಣ್ಣಿಗೇರಿ, ಚೆನ್ನಮ್ಮ ಹುಳಕಣ್ಣವರ, ರೇಖಾ ಜಡಿಯವರ, ಸುರೇಖಾ ಕುರಿ, ಬಾಳಮ್ಮ ಶಿವಾನಂದಮಠ, ಭಾಗ್ಯಶ್ರೀ ಬಾಬಣ್ಣ, ನಾಗಪ್ಪ ಗುಗ್ಗರಿ, ನೀಲಪ್ಪ ಗಡ್ಡಣ್ಣನವರ, ಉಮೇಶ ಜೋಳದ, ಹನುಮಂತಪ್ಪ ಮುಂಡರಗಿ, ಮಾರುತಿ ಜಡಿಯವರ, ಸುರೇಶ ಮಾಳಗಿಮನಿ, ರಾಜು ಪವರ, ಉಮೇಶ ಜೋಳದ, ಹನುಮಂತ ಗಿಡ್ಡಹನಮಣ್ಣವರ, ಸತೀಶ ಗಿಡ್ಡಹನಮಣ್ಣವರ, ಶೇಖರಪ್ಪ ಚನ್ನಳ್ಳಿ, ಫಕೀರೇಶ ಪೂಜಾರ, ಕುಶಾಲ ದೇವರಮನಿ, ಮಲ್ಲೇಶ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.
ಸರಕಾರ ಕುರಿಗಾರನ ಹತ್ಯೆ ಸೇರಿದಂತೆ ಎಲ್ಲಾ ಹಿಂಸಾತ್ಮಕ ಘಟನೆಗಳಿಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಪೊಲೀಸ್ ಪೆಟ್ರೋಲಿಂಗ್ ಹೆಚ್ಚಿಸಿ, ಕುರಿಗಾಹಿಗಳಿಗೆ ವಿಶೇಷ ರಕ್ಷಣೆ ಒದಗಿಸಬೇಕು. ಹತ್ಯೆಗೀಡಾದ ಕುರಿಗಾರರನ ಕುಟುಂಬಕ್ಕೆ ಆರ್ಥಿಕ ಪರಿಹಾರ ನೀಡಬೇಕು ಮತ್ತು ಕುರಿಗಾರರಿಗೆ ಬಂದೂಕು ತರಬೇತಿ ನೀಡಿ, ಲೈಸನ್ಸ್ ನೀಡುವ ಪ್ರಕ್ರಿಯೆ ಸರಳೀಕೃತಗೊಳಿಸಬೇಕು ಎಂದು ಪ್ರತಿಭಟನಾಕಾರರು ಒಕ್ಕೊರಲಿನಿಂದ ಆಗ್ರಹಿಸಿದರು.