ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೊಂದು ಖತರ್ನಾಕ್ ಕಳ್ಳರ ಗ್ಯಾಂಗ್ ಪತ್ತೆಯಾಗಿದೆ. ಇನ್ನೋವಾ ಕಾರಿನಲ್ಲಿ ಬಂದು ರಸ್ತೆಯಲ್ಲಿ ನಿಲ್ಲಿಸಿದ್ದ ಹ್ಯುಂಡೈ ಕ್ರೆಟಾ ಕಾರಿನ ನಾಲ್ಕು ಚಕ್ರ ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ಬೆಂಗಳೂರು ನಗರದ ಗಾಂಧಿನಗರ ಹೊಟೇಲ್ ಬಳಿ ನಡೆದಿದೆ.
ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಕಳ್ಳತನ ನಡೆದಿದೆ. ಕಳ್ಳರ ಕಂಪ್ಲೀಟ್ ಕರಾಮತ್ತು ಮೊಬೈಲ್ ನಲ್ಲಿ ಸೆರೆಯಾಗಿದೆ. ಇನ್ನೋವಾ ಕಾರಿನಲ್ಲಿ ಬಂದ ಖದೀಮರು, ಮೊದಲಿಗೆ ಸುತ್ತಲೂ ಯಾರು ಇಲ್ಲದನ್ನ ಗಮನಸಿದ್ದಾರೆ. ನಂತರ ಸೀದಾ ಬಂದು ಹೋಟೆಲ್ ಮುಂದೆ ನಿಲ್ಲಿಸಿದ್ದ ಕಾರಿಗೆ ಕನ್ನ ಹಾಕಿದ್ದಾರೆ. ಕಾರಿಗೆ ಜಾಕ್ ಹಾಕಿ ಖದೀಮರು ನಾಲ್ಕು ಚಕ್ರ ಬಿಚ್ಚಿದ್ದಾರೆ.
ನಂತರ ನಾಲ್ಕು ಚಕ್ರಗಳಿಗೆ ಕಲ್ಲುಗಳನ್ನ ಇಟ್ಟು ವೀಲ್ ಬಿಚ್ಚಿ ಕಾರಿನೊಳಗಡೆ ಹಾಕೊಂಡು ಎಸ್ಕೇಪ್ ಆಗಿದ್ದಾರೆ. ಸದ್ಯ ಕಾರು ಮಾಲೀಕ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಚಕ್ರಗಳನ್ನು ಕದ್ದ ಕಳ್ಳರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.