ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕಿಲ್ಲಾ ಚಂದ್ರಸಾಲಿಯ ಸರಕಾರಿ ಕಾಮ-ರತಿ ಉತ್ಸವವು ಗದಗ ಜಿಲ್ಲೆಗೆ ಕಿರೀಟವಿದ್ದಂತೆ. ನವಲಗುಂದದ ರಾಮಲೀಂಗೇಶ್ವರ ಕಾಮ-ರತಿ ಉತ್ಸವದ ನಂತರ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಕಾಮ-ರತಿ ಉತ್ಸವ ಇದಾಗಿದೆ ಎಂದು ಗದಗ ಶಹರ ಪೊಲೀಸ್ ಠಾಣೆಯ ಸಿಪಿಐ ಡಿ.ಬಿ. ಪಾಟೀಲ ಅಭಿಪ್ರಾಯಪಟ್ಟರು.
ನಗರದ ಕಿಲ್ಲಾ ಓಣಿಯ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿ 160ನೇ ವರ್ಷದ ಕಿಲ್ಲಾ ಚಂದ್ರಸಾಲಿಯ ಸರಕಾರಿ ಕಾಮ-ರತಿ ಉತ್ಸವ ಸಮಿತಿಯಿಂದ ಹಮ್ಮಿಕೊಂಡ ಶಾಂತಿ ಸಭೆಯಲ್ಲಿ ಅವರು ಮಾತನಾಡಿ, ವರ್ಷದಿಂದ ವರ್ಷಕ್ಕೆ ಪ್ರಸಿದ್ಧಿ ಪಡೆಯುತ್ತಿರುವ ಕಿಲ್ಲಾ ಚಂದ್ರಸಾಲಿ ಸರಕಾರಿ ಕಾಮ-ರತಿ ಉತ್ಸವ ಸಮಿತಿಗೆ ಪೊಲೀಸ್ ಇಲಾಖೆಯಿಂದ ಭದ್ರತೆಗಾಗಿ ಗನ್ಮ್ಯಾನ್ ನೀಡಲಾಗುವುದು. ಈ ಓಣಿಯ ಗುರು-ಹಿರಿಯರು ಯುವಕರಿಗೆ ಮಾರ್ಗದರ್ಶನ ನೀಡಿ ಮಂಗಳವಾರ ನಡೆಯುವ ಮೆರವಣಿಗೆಯನ್ನು ಬೇಗನೆ ಆರಂಭಿಸಿ ಬೇಗನೆ ಮುಗಿಸಬೇಕು ಎಂದು ಮನವಿ ಮಾಡಿದರು.
ಯುವ ಮುಖಂಡ ಸುಧೀರ ಕಾಟಿಗರ ಮಾತನಾಡಿ, 160 ವರ್ಷಗಳ ಹಿಂದೆ ನಮ್ಮ ಓಣಿಯ ಹಿರಿಯರು ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮಕ್ಕೆ ನಡೆದುಕೊಂಡು ಹೋಗಿ ಕಾಮ-ರತಿಯನ್ನು ತಂದು ಪ್ರತಿಷ್ಠಾಪಿಸಿದ್ದಾರೆ. ನಂಬಿ ಬಂದವರಿಗೆ ಬೇಡಿದ ಫಲವನ್ನು ನೀಡುತ್ತಾ ಬಂದಿದ್ದರಿಂದ ಇಂದು ಭಕ್ತರಿಂದ ಸುಮಾರು 25 ಕೆ.ಜಿ.ಯಷ್ಟು ಬಂಗಾರದ ಒಡವೆಗಳನ್ನು ಧರಿಸುತ್ತಾ ಬಂದಿರುವುದು ಪ್ರಸಿದ್ಧಿಗೆ ಸಾಕ್ಷಿಯಾಗಿದೆ. ಅಲ್ಲದೆ, ಈ ಕಾಮ-ರತಿಗೆ ಶತಮಾನಗಳಿಂದ ಸರಕಾರಿ ಗೌರವದೊಂದಿಗೆ ಭದ್ರತೆ ನೀಡುತ್ತಾ ಬಂದಿರುವುದು ವಿಶೇಷವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಎಸ್ಐ ಕಿರಣಕುಮಾರ, ನಗರಸಭೆ ಸದಸ್ಯೆ ಶೈಲಾ ಬಾಕಳೆ, ಕಾಮ-ರತಿ ಸಮಿತಿಯ ಅಧ್ಯಕ್ಷ ಸುರೇಶ ಬಾಕಳೆ, ಉಪಾಧ್ಯಕ್ಷ ಮನೋಹರ ದಲಬಂಜನ, ಗೌರವ ಕಾರ್ಯದರ್ಶಿ ವೆಂಕಟೇಶ ಖೋಡೆ, ಕಾರ್ಯದರ್ಶಿ ವೆಂಕಟೇಶ ಬಾಂಡಗೆ, ಖಜಾಂಚಿ ಪ್ರಕಾಶ ಕಾಟಿಗರ, ಹಿರಿಯರಾದ ಕುಮಾರ ಬದಿ, ಪರಶುರಾಮ ಬದಿ, ಡಿ.ಎಚ್. ಕಬಾಡಿ, ಗೋಪಾಲ ಖೋಡೆ, ರಾಜೇಶ ಖೋಡೆ, ಅಂಜು ಖಟವಟೆ, ಶ್ರೀಕಾಂತ ಪವಾರ, ಮಾಧು ಬದಿ, ಸರೋಜಾಬಾಯಿ ಶೇಜವಾಡೇಕರ ಮುಂತಾದವರು ಉಪಸ್ಥಿತರಿದ್ದರು.
ಶ್ರೀಕಾಂತ ಬಾಕಳೆ ಸ್ವಾಗತಿಸಿದರು. ಜಿ.ಎನ್. ಹಬೀಬ ನಿರೂಪಿಸಿದರು. ಪರಶುರಾಮ ಮಿಸ್ಕೀನ್ ವಂದಿಸಿದರು.
ದಿ. ಬಾಬಾಸಾ ಡೋಂಗರಸಾ ಖೋಡೆ ಅವರು ಕಾಮ-ರತಿ ಉತ್ಸವ ಕಾರ್ಯಗಳಲ್ಲಿ ಸೇವೆ ಸಲ್ಲಿಸಿದ್ದರಿಂದ ಅವರ ಧರ್ಮಪತ್ನಿ ಕೌಶಲ್ಯಬಾಯಿ ಖೋಡೆ ಅವರಿಗೆ ಮತ್ತು ಸಮಿತಿಯ ಮಾಜಿ ಅಧ್ಯಕ್ಷ ಪ್ರೇಮನಾಥಸಾ ಖೋಡೆ ಅವರನ್ನು ಸಮಿತಿಯಿಂದ ಸನ್ಮಾನಿಸಲಾಯಿತು.