ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ/ಶಿರಹಟ್ಟಿ: ವಿಧಾನಸಭಾ ಬಜೆಟ್ ಅಧಿವೇಶನದಲ್ಲಿ ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ ಗುರುವಾರ ವಿವಿಧ ವಿಷಯಗಳ ಕುರಿತು ಗಮನ ಸೆಳೆದರಲ್ಲದೆ, ತಮಗೆ ದೊರೆತ ಅಲ್ಪಾವದಿಯಲ್ಲಿಯೇ ವಿವಿಧ ವಿಷಯಗಳ ಕುರಿತು ಮಾತನಾಡಿ ಸರಕಾರವನ್ನು ಒತ್ತಾಯಿಸಿದರು.
ಅಧಿವೇಶನದಲ್ಲಿ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, ಇದೇ ತಿಂಗಳಲ್ಲಿ ಮುಂಡರಗಿ ತಾಲೂಕಿನ ಮದಂಲಗಟ್ಟಿ ಬಳಿ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ಮೂವರು ಯುವಕರು, 3 ತಿಂಗಳ ಹಿಂದೆ ಮಕ್ತುಂಪುರ ಗ್ರಾಮದ ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕಾಗಿ ತನ್ನ ಮಕ್ಕಳು ಹಾಗೂ ತನ್ನ ತಂಗಿಯ ಮಗನನ್ನು ಕೊರ್ಲಹಳ್ಳಿ ಸೇತುವೆ ಮೇಲಿಂದ ಎಸೆದು ತಾನೂ ಮೃತಪಟ್ಟ ವಿಷಯಗಳನ್ನು ಪ್ರಸ್ತಾಪಿಸಿ, ಕೊರ್ಲಹಳ್ಳಿ ಹಾಗೂ ಹಮ್ಮಿಗಿ ಸೇತುವೆಗಳ ಬಳಿ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಸರಕಾರದ ವತಿಯಿಂದ ನೀಡಬೇಕೆಂದು ಒತ್ತಾಯಿಸಿದರು.
ಕ್ಷೇತ್ರದ ಸೂರಣಗಿ ಹಾಗೂ ಹೊಳೆ ಇಟಗಿ ಕೆ.ಇ.ಬಿ ಗ್ರಿಡ್ಗಳನ್ನು 33 ಕೆ.ವಿ.ಯಿಂದ 110 ಕೆ.ವಿ.ಯವರೆಗೆ ಅಪ್ಗ್ರೇಡ್ ಮಾಡುವದು, ಹೆಬ್ಬಾಳ ಗ್ರಾಮದ ಸಮೀಪದಲ್ಲಿ ಸಬ್ ಸ್ಟೇಷನ್ ಮಾಡುವುದು, ಗಂಗಾ ಕಲ್ಯಾಣ ಯೋಜನೆಯಲ್ಲಿ ರೈತರಿಗೆ ಪ್ರತ್ಯೇಕ ಟ್ರಾನ್ಸ್ಫಾರ್ಮರ್ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಯೋಜನೆ ಅಡಿಯಲ್ಲಿ ಮೀಸಲಿಟ್ಟ ಹಣವು ನಿಗಮದ ಯೋಜನೆಗಳಿಗಷ್ಟೇ ಅಲ್ಲದೆ, ಅಭಿವೃದ್ಧಿ ಕಾಮಗಾರಿಗಳಿಗೂ ಸಾಕಾಗುತ್ತಿಲ್ಲ ಎಂಬುದರ ಕುರಿತು ಸರಕಾರದ ಗಮನ ಸೆಳೆದರು.
ಗ್ರಾಮೀಣಾಭಿವೃದ್ಧಿ ಇಲಾಖೆ ಅಡಿಯಲ್ಲಿ ಬರುವ ರಸ್ತೆಗಳು ಹದಗೆಟ್ಟಿದ್ದು, ಸದರಿ ರಸ್ತೆಗಳ ನಿರ್ಮಾಣ, ಪೌರಾಡಳಿತ ಇಲಾಖೆ ಅಡಿಯಲ್ಲಿ ಬರುವ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಯಾವುದೇ ಅನುದಾನ ಬಿಡುಗಡೆಯಾಗದಿರುವದು, ಲಕ್ಷ್ಮೇಶ್ವರ ಆಸ್ಪತ್ರೆಯನ್ನು ಆದಷ್ಟು ಶೀಘ್ರ ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತು ಸಂಬಂಧಿಸಿದ ಸಚಿವರನ್ನು ಆಗ್ರಹಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ವಿವಿಧ ಇಲಾಖೆಗಳ ಸಚಿವರು, ಈ ಕುರಿತಂತೆ ಶೀಘ್ರವೇ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.
ಬೆಳ್ಳಟ್ಟಿ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಬನ್ನಿಕೊಪ್ಪ, ಕಡಕೋಳ ಅಥವಾ ಮಜ್ಜೂರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ, ಆಶಾ ಕಾರ್ಯಕರ್ತರಿಗೆ ಪ್ರತಿ ತಿಂಗಳು 10 ಸಾವಿರ ರೂ ಸಂಭಾವನೆಯನ್ನು ನಿಗದಿಪಡಿಸುವದು, ಜಾಲವಾಡಗಿ ಏತ ನೀರಾವರಿಗೆ 197 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡುವುದು, 20 ಕೆರೆಗಳನ್ನು ತುಂಬಿಸುವ ಯೋಜನೆ ಅಡಿಯಲ್ಲಿ ಕೆಲಸವನ್ನು ಮಾಡದೆ ಬಿಲ್ಲನ್ನು ಪಾವತಿಸಿದ್ದನ್ನು ಪರಿಶೀಲಿಸಲು ಶಾಸಕರು ಸಭಾಧ್ಯಕ್ಷರ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು. ಅಲ್ಲದೆ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ಥಿ ಹಾಗೂ ನಿರ್ವಹಣೆಗೆ ಕ್ರಮ ಕೈಗೊಳ್ಳಲು ಶಾಸಕ ಡಾ. ಚಂದ್ರು ಲಮಾಣಿ ಆಗ್ರಹಿಸಿದರು.