ಶಿಕ್ಷಣ ಸಂಸ್ಥೆಯ ಗುಣಮಟ್ಟಕ್ಕೆ ಖಾತ್ರಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸುಮಾರು 2 ದಶಕಗಳ ಹಿಂದೆ ಪಟ್ಟಣದಲ್ಲಿ ಪ್ರಾರಂಭಗೊಂಡ ಶ್ರೀಮತಿ ಕಮಲಾ-ಶ್ರೀ ವೆಂಕಪ್ಪ ಎಂ ಅಗಡಿ ಇಂಜಿನಿಯರಿಂಗ್ ಕಾಲೇಜು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ನನಸು ಮಾಡಿದೆ. ಈ ಕಾಲೇಜಿಗೆ ಈಗ ವಿಶ್ವವಿದ್ಯಾಲಯ ಅನುದಾನ ಆಯೋಗದ(ಯುಜಿಸಿ) ರಾಷ್ಟ್ರೀಯ ಮೌಲ್ಯಮಾಪನ ಮಾನ್ಯತಾ ಮಂಡಳಿ(ನ್ಯಾಕ್) ವತಿಯಿಂದ ಬಿ++ ಮಾನ್ಯತೆ ಲಭಿಸಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪರಶುರಾಮ ಬಾರಕಿ ತಿಳಿಸಿದರು.

Advertisement

ಕಾಲೇಜಿನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ತಮ್ಮ ಹರ್ಷವನ್ನು ವ್ಯಕ್ತಪಡಿಸಿ ಮಾತನಾಡಿದ ಅವರು, ಪ್ರಥಮ ಬಾರಿಗೆ ನಮ್ಮ ಸಂಸ್ಥೆಗೆ ನ್ಯಾಕ್ ಮಾನ್ಯತೆ ಲಭಿಸಿದ್ದು, ಇದೊಂದು ಹೆಮ್ಮೆಯ ವಿಷಯವಾಗಿದೆ. ಸಮಿತಿಯು ಶಿಕ್ಷಣದ ಗುಣಮಟ್ಟ, ಸಂಶೋಧನೆಗಳು, ಅಧ್ಯಾಪಕರು, ಮೂಲಸೌಲಭ್ಯಗಳು ಇತ್ಯಾದಿ ವಿಷಯಗಳಲ್ಲಿ ಶಿಕ್ಷಣ ಸಂಸ್ಥೆಯ ಗುಣಮಟ್ಟವನ್ನು ಪರೀಕ್ಷಿಸುತ್ತಿದ್ದು, ಇವೆಲ್ಲವುಗಳಲ್ಲಿ ಅಗಡಿ ಇಂಜಿನಿಯರಿಂಗ್ ಸಂಸ್ಥೆ ಯಶಸ್ವಿಯಾಗಿ ನಿರ್ವಹಿಸುತ್ತಿರುವದನ್ನು ಮನಗಂಡು ನ್ಯಾಕ್ ಮಾನ್ಯತೆ ನೀಡಿರುವದರಿಂದ ಸಂಸ್ಥೆಯ ಬಗ್ಗೆ ಜನರಲ್ಲಿ ಮತ್ತಷ್ಟು ವಿಶ್ವಾಸಾರ್ಹತೆ ಮೂಡುವಂತಾಗಿದೆ. ಸಂಸ್ಥೆಯ ಅಧ್ಯಕ್ಷ ಡಾ. ಹರ್ಷವರ್ಧನ್ ಅಗಡಿ ಮತ್ತು ಉಪಾಧ್ಯಕ್ಷೆ ಗೀತಾ ಹರ್ಷವರ್ಧನ ಅಗಡಿ ಮತ್ತು ಆಡಳಿತ ಮಂಡಳಿಯವರು ಹರ್ಷ ವ್ಯಕ್ತಪಡಿಸಿದ್ದು, ಸಂಸ್ಥೆಯ ಎಲ್ಲ ಸಿಬ್ಬಂದಿಗಳಿಗೆ ಶುಭ ಕೋರಿದ್ದಾರೆ ಎಂದು ಹೇಳಿದರು.

ನ್ಯಾಕ್ ಮಾನ್ಯತೆಯ ಸಂದರ್ಭದಲ್ಲಿ ಮುಖ್ಯ ಸಂಯೋಜಕ ಡಾ. ಆರ್.ಎಂ. ಪಾಟೀಲ, ಆಡಳಿತಾಧಿಕಾರಿ ಪ್ರೊ. ವಿಕ್ರಮ ಶಿರೋಳ, ಶೈಕ್ಷಣಿಕ ಸಂಯೋಜಕ ಡಾ. ಸುಭಾಸ ಮೇಟಿ, ಕೋರ್ ಕಮಿಟಿ ಸದಸ್ಯರು, ವಿಭಾಗಗಳ ಮುಖ್ಯಸ್ಥರು ಹಾಜರಿದ್ದರು.

ಈ ಸಂದರ್ಭದಲ್ಲಿ ಡಾ. ಆರ್.ಎಂ. ಪಾಟೀಲ, ಪಿಯು ಕಾಲೇಜು ಪ್ರಾಚಾರ್ಯ ಡಾ. ಎನ್. ಹಯವದನ, ಡಾ. ಸುಭಾಸ ಮೇಟಿ, ಪ್ರೊ. ವಿಕ್ರಂ ಶಿರೋಳ, ರವಿ ಪ್ರಕಾಶ, ಸಂಯೋಜಕರಾದ ಡಾ. ಶಿವಕುಮಾರ ಗೌಡರ, ಡಾ. ಎಸ್.ವಿ. ಮಹಾಪುರುಷ, ಪ್ರೊ. ಸೋಮಶೇಖರ ಕೆರಿಮನಿ ಹಾಜರಿದ್ದರು.

ಮಾ.27 ಮತ್ತು 28ರಂದು ಜಾಗತಿಕ ಸಮ್ಮಿಲನ I2025 ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ ಬಹು-ಶಿಸ್ತಿನ ಸಂಶೋಧನಾ ಪ್ರವೃತ್ತಿಗಳ ಕುರಿತು 2ನೇ ಅಂತಾರಾಷ್ಟ್ರೀಯ ಸಮ್ಮೇಳನ ನಡೆಸಲಾಗುವದು. ಈ ಕಾರ್ಯಕ್ರಮಕ್ಕೆ ದೇಶ-ವಿದೇಶಗಳಿಂದ ಅತಿಥಿಗಳು ಆಗಮಿಸಲಿದ್ದು, ವಿದೇಶದಿಂದ ಒಂದು ಮತ್ತು ವಿವಿಧ ರಾಜ್ಯಗಳಿಂದ ಅನೇಕ ಸಂಶೋಧನಾ ವಿಷಯಗಳು ಮಂಡನೆಯಾಗಲಿವೆ. ಈಗಾಗಲೆ ಸಂಸ್ಥೆಯ ವತಿಯಿಂದ ಪಿಯುಸಿ ಕಾಲೇಜು ಯಶಸ್ವಿಯಾಗಿ ನಡೆಯುತ್ತಿದ್ದು, ಸುಮಾರು 12 ಕೋಟಿ ರೂಗಳ ವೆಚ್ಚದಲ್ಲಿ ಪಿಯುಸಿ ಕಾಲೇಜು ಕಟ್ಟಡ ನಿರ್ಮಾಣವಾಗಲಿದೆ ಎಂದು ಡಾ. ಪರಶುರಾಮ ಬಾರಕಿ ಹೇಳಿದರು.


Spread the love

LEAVE A REPLY

Please enter your comment!
Please enter your name here