ರಾಯಚೂರು:- ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಪತ್ನಿ ಸಹೋದರಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಏಗನೂರು ಗ್ರಾಮದಲ್ಲಿ ಜರುಗಿದೆ.
ಘಟನೆ ಬಳಿಕ ಎಸ್ಕೇಪ್ ಆಗಿದ್ದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ತವರು ಮನೆಯಲ್ಲಿದ್ದ ಪತ್ನಿ ಪದ್ಮ ಹಾಗೂ ಪತ್ನಿ ಸಹೋದರಿ ಬೂದೇವಿ ಮೇಲೆ ಆರೋಪಿ ತಿಮ್ಮಪ್ಪ ಮಚ್ಚಿನಿಂದ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದ.
ಮೊದಲನೇ ಪತ್ನಿ ಪದ್ಮಾಗೆ ನಾಲ್ಕು ಮಕ್ಕಳಿದ್ದು ವಿಚ್ಛೇದನ ಕೊಡದೇ ತಿಮ್ಮಪ್ಪ 2ನೇ ಮದುವೆಯಾಗಿದ್ದ. ಹೀಗಾಗಿ ಜೀವನಾಂಶ ಕೋರಿ ಪತ್ನಿ ನ್ಯಾಯಾಲಯ ಮೆಟ್ಟಿಲೇರಿದ್ದಳು. ಅಲ್ಲದೇ ಪತ್ನಿಗೆ ತಿಳಿಯದಂತೆ ತಿಮ್ಮಪ್ಪ ಜಮೀನು ಮಾರಾಟ ಮಾಡಿದ್ದ. ಜಮೀನು ವಿಚಾರಕ್ಕೆ ಪತ್ನಿ ಪದ್ಮ ತಕರಾರು ಹಾಕಿದ್ದಳು. ಇದೇ ವಿಚಾರಕ್ಕೆ ಜಗಳ ತೆಗೆದು ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ.
ಅಕ್ಕನ ಮೇಲಿನ ಹಲ್ಲೆ ತಡೆಯಲು ಹೋದ ತಂಗಿ ಬೂದೇವಿ ಮೇಲೆಯೂ ಹಲ್ಲೆಯಾಗಿದೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.