ಬೆಂಗಳೂರು: ಪ್ರತಿಷ್ಠಿತ ಎಂಎನ್ಸಿ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನಿರುದ್ಯೋಗಿ ಯುವಕ-ಯುವತಿಯರಿಂದ ಹಣ ಪಡೆದು ವಂಚಿಸುತ್ತಿದ್ದ ನಕಲಿ ಉದ್ಯೋಗ ಜಾಲವನ್ನು ಬೆಂಗಳೂರಿನ ವೈಟ್ಫೀಲ್ಡ್ ವಿಭಾಗದ ಪೊಲೀಸರು ಭೇದಿಸಿದ್ದಾರೆ.
“ಕೈತುಂಬಾ ಸಂಬಳ, ಪ್ರತಿ ವರ್ಷ ಭರ್ಜರಿ ಹೈಕ್” ಎಂಬ ಆಕರ್ಷಕ ಜಾಹೀರಾತುಗಳ ಮೂಲಕ ಉದ್ಯೋಗ ಆಕಾಂಕ್ಷಿಗಳನ್ನು ಸೆಳೆಯುತ್ತಿದ್ದ ವಂಚಕರು, ವೈಟ್ಫೀಲ್ಡ್ನಲ್ಲಿ ನಕಲಿ ಕಂಪನಿ ಕಚೇರಿ ತೆರೆದು ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಪ್ರಚಾರ ನಡೆಸುತ್ತಿದ್ದರು.
ದೇಶದ ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸುತ್ತಿದ್ದರು. ಬಳಿಕ ಪ್ರವೇಶ ಶುಲ್ಕದ ಹೆಸರಿನಲ್ಲಿ ಪ್ರತಿ ಅಭ್ಯರ್ಥಿಯಿಂದ 2 ಸಾವಿರದಿಂದ 3 ಸಾವಿರ ರೂ.ವರೆಗೆ ಹಣ ವಸೂಲಿ ಮಾಡುತ್ತಿದ್ದರು. ಒಂದೇ ಹಾಲ್ನಲ್ಲಿ 30ರಿಂದ 40 ಜನರಿಗೆ ಪರೀಕ್ಷೆ ಬರೆಸುತ್ತಿದ್ದ ವಂಚಕರು, ಫಲಿತಾಂಶದ ಬಳಿಕ ಕರೆ ಮಾಡುವುದಾಗಿ ಹೇಳಿ ಕಳುಹಿಸುತ್ತಿದ್ದರು.
ಆದರೆ ವಾರಗಳು ಕಳೆದರೂ ಯಾವುದೇ ಮಾಹಿತಿ ನೀಡದೇ, ಅಭ್ಯರ್ಥಿಗಳು ಕರೆ ಮಾಡಿದಾಗ “ಪರೀಕ್ಷೆಯಲ್ಲಿ ಆಯ್ಕೆಯಾಗಿಲ್ಲ” ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಕೆಲವರು ಕಡಿಮೆ ಮೊತ್ತದ ಹಣ ಎಂದು ಭಾವಿಸಿ ದೂರು ನೀಡದೇ ಸುಮ್ಮನಾಗಿದ್ದರು. ಇದೇ ರೀತಿಯಲ್ಲಿ ಹಲವು ವರ್ಷಗಳಿಂದ ಲಕ್ಷಾಂತರ ರೂ. ವಂಚನೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪರೀಕ್ಷಾ ಪತ್ರಿಕೆ ಕೇಳಿದಾಗ ಬಯಲಾದ ವಂಚನೆ
ಇತ್ತೀಚೆಗೆ ಕೆಲ ಅಭ್ಯರ್ಥಿಗಳು ತಾವು ಬರೆದ ಪರೀಕ್ಷಾ ಪತ್ರಿಕೆಗಳನ್ನು ತೋರಿಸುವಂತೆ ಒತ್ತಾಯಿಸಿದ್ದು, ಕಚೇರಿ ಸಿಬ್ಬಂದಿ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಅನುಮಾನಗೊಂಡು ವೈಟ್ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತನಿಖೆ ನಡೆಸಿದ ಪೊಲೀಸರು ಇದು ಸಂಪೂರ್ಣ ನಕಲಿ ಕಂಪನಿ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪವನ್ ಗೋಪಾಲ್ ಎಂಬಾತನನ್ನು ಬಂಧಿಸಲಾಗಿದೆ. ಈ ವಂಚನೆ ಜಾಲದ ಹಿಂದೆ ದೊಡ್ಡ ಗ್ಯಾಂಗ್ ಕಾರ್ಯನಿರ್ವಹಿಸುತ್ತಿರುವ ಶಂಕೆ ವ್ಯಕ್ತವಾಗಿದ್ದು, ವೈಟ್ಫೀಲ್ಡ್ ವಿಭಾಗದ ಡಿಸಿಪಿ ಸೈದುಲ್ಲು ಅಡಾವತ್ ಅವರ ಮಾರ್ಗದರ್ಶನದಲ್ಲಿ ತನಿಖೆ ಮುಂದುವರಿದಿದೆ.



