ಇಂದು ಚೆನ್ನೈನ ಚಿದಂಬರಂ ಸ್ಟೇಡಿಯಂ ನಲ್ಲಿ ನಡೆದ IPL ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದು ಬೀಗಿದೆ. ಈ ಮೂಲಕ CSK ತವರಲ್ಲೇ ಹೀನಾಯವಾಗಿ ಸೋತು ಭಾರೀ ಮುಖಭಂಗ ಅನುಭವಿಸಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದ ಋತುರಾಜ್ ಗಾಯಕವಾಡ್ ಬಳಗವು ಬಳಿಕದ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ, ಕೆ.ಎಲ್.ರಾಹುಲ್ ಅಮೋಘ ಅರ್ಧಶತಕದ (77) ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 183 ರನ್ಗಳ ಸವಾಲಿನ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಚೆನ್ನೈ ಐದು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಲಷ್ಟೇ ಸಾಧ್ಯವಾಯಿತು. ವಿಜಯ್ ಶಂಕರ್ ಅಜೇಯ 69 ರನ್ ಗಳಿಸಿದರು. ಅನುಭವಿ ಮಹೇಂದ್ರ ಸಿಂಗ್ 30 ರನ್ ಗಳಿಸಿ ಔಟಾಗದೆ ಉಳಿದರು. ರಚಿನ್ ರವೀಂದ್ರ (3), ನಾಯಕ ಋತುರಾಜ್ ಗಾಯಕವಾಡ್ (5), ಡೆವೂನ್ ಕಾನ್ವೆ (13), ಶಿವಂ ದುಬೆ (18) ಹಾಗೂ ರವೀಂದ್ರ ಜಡೇಜ (2) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ನಿಧಾನಗತಿಯ ಆಟವು ಚೆನ್ನೈ ತಂಡಕ್ಕೆ ಮುಳುವಾಗಿ ಪರಿಣಮಿಸಿತು. ಶಂಕರ್ 54 ಎಸೆತಗಳಲ್ಲಿ ಅಜೇಯ 69 ರನ್ (1 ಸಿಕ್ಸರ್, 5 ಬೌಂಡರಿ) ಗಳಿಸಿದರು. ಧೋನಿ 26 ಎಸೆತಗಳಲ್ಲಿ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 30 ರನ್ ಗಳಿಸಿ ಔಟಾಗದೆ ಉಳಿದರು. ಡೆಲ್ಲಿ ತಂಡದ ಪರ ವಿಪ್ರಾಜ್ ನಿಗಂ, ಮಿಚೆಲ್ ಸ್ಟಾರ್ಕ್, ಕುಲದೀಪ್ ಯಾದವ್ ನಿಖರ ದಾಳಿ ಸಂಘಟಿಸಿದರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡವು 25 ರನ್ ಗಳ ಅಂತರದಿಂದ ಚೆನ್ನೈ ಮಣಿಸುವಲ್ಲಿ ಯಶಸ್ವಿಯಾಗಿದೆ.