ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರವು ಹಾಲು, ವಿದ್ಯುತ್, ಡಿಸೈಲ್, ಪೆಟ್ರೋಲ್, ಟೋಲ್ ತೆರಿಗೆ, ಬಾಂಡ್ ಪೇಪರ್, ಆಸ್ತಿ ನೋಂದಣಿ ಇತ್ಯಾದಿ ದರ, ಶುಲ್ಕಗಳಲ್ಲಿ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯ ರಾಜ್ಯಾಧ್ಯಕ್ಷ ಪಿ. ಸುಬ್ರಮಣ್ಯಂರೆಡ್ಡಿಯವರ ನೇತೃತ್ವದಲ್ಲಿ ಗದಗ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಶಿವಾನಂದಯ್ಯ ಹಿರೇಮಠ, ರಾಜ್ಯ ಸರ್ಕಾರವು ಇವುಗಳ ದರದಲ್ಲಿ ಏರಿಕೆ ಮಾಡಿರುವುದರಿಂದ ಬಡವರಿಗೆ, ಮಧ್ಯಮ ವರ್ಗದ ಮತ್ತು ಗ್ರಾಮೀಣ ಜನತೆಗೆ ಆರ್ಥಿಕ ತೊಂದರೆಯನ್ನುಂಟುಮಾಡಿದೆ. ರಾಜ್ಯ ಸರ್ಕಾರ ಈ ಕೂಡಲೇ ಈ ಎಲ್ಲ ಬೆಲೆ ಏರಿಕೆಗಳನ್ನು ಕಡಿಮೆ ಮಾಡಿ ಜನತೆಗೆ ನೆಮ್ಮದಿಯ ಜೀವನ ಸಾಗಿಸುವಂತೆ ಅನುಕೂಲ ಮಾಡಬೇಕೆಂದು ಹೇಳಿದರು.
ಜಿಲ್ಲಾಧ್ಯಕ್ಷ ಶಿವಕುಮಾರ ರಾಮನಕೊಪ್ಪ ಮಾತನಾಡಿ, ರಾಜ್ಯ ಸರ್ಕಾರ ಬೆಲೆ ಏರಿಕೆಗಳನ್ನು ಕಡಿಮೆಗೊಳಿಸದಿದ್ದರೆ ರಾಜ್ಯದ ಎಲ್ಲ ಕನ್ನಡಪರ ಹಾಗೂ ವಿವಿಧ ಸಂಘಟನೆಗಳು ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಘಟಕದ ಅಧ್ಯಕ್ಷ ಶಿವಾನಂದ ಪಲ್ಲೇದ, ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಆರ್. ಭೂಸನೂರಮಠ, ರಾಜ್ಯ ಸಂಚಾಲಕ ಪ್ರಭಾಕರ ಹೆಬಸೂರ, ರಾಜ್ಯ ವಕ್ತಾರ ಎಂ.ಎಸ್. ಪರ್ವತಗೌಡ್ರ, ಜಿಲ್ಲಾ ಕಾರ್ಯದರ್ಶಿ ಷಣ್ಮುಖ ಸುಲಾಖೆ ಮುಂತಾದವರು ಉಪಸ್ಥಿತರಿದ್ದರು.