ಬೆಳಗಾವಿ:– ಓರ್ವ ಸ್ವಾಮಿಗಳಾಗಿ ವ್ಯಕ್ತಿಗತ ಹೋರಾಟ ಮಾಡೋದು ತಪ್ಪು ಎಂದು ಹೇಳುವ ಮೂಲಕ ಶಾಸಕ ಯತ್ನಾಳ್ ಪರ ನಿಂತಿರುವ ಜಯಮೃತ್ಯುಂಜಯ ಶ್ರೀಗಳ ನಡೆಗೆ ಶಾಸಕ ರಾಜು ಕಾಗೆ ಬೇಸರ ಹೊರ ಹಾಕಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸ್ವಾಮೀಜಿಗಳು ಸಮಾಜದ ಪರವಾದ ನಿಲುವಿರಬೇಕು. ಸ್ವಾಮಿಗಳಾಗಿ ವ್ಯಕ್ತಿಗತವಾಗಿ ಹೋರಾಟ ಮಾಡುವುದು ತಪ್ಪು. ಯತ್ನಾಳ್ ಅವರನ್ನು ಪಕ್ಷ ಉಚ್ಚಾಟನೆ ಮಾಡಿದ್ದೂ ಅವರ ಆಂತರಿಕ ವಿಷಯ. ಸ್ವಾಮಿಗಳು ಪಂಚಮಸಾಲಿ 2 ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ರಾಜಕೀಯವಾಗಿ, ಒಬ್ಬ ವ್ಯಕ್ತಿಯ ಪರವಾಗಿ ಹೋರಾಟ ಮಾಡುವುದು ತಪ್ಪು ಎಂದರು.
2ಎ ಮೀಸಲಾತಿ ವಿಚಾರಕ್ಕೆ ಕಾಂಗ್ರೆಸ್ ಸರ್ಕಾರ ಹಿಂದೇಟು ವಿಚಾರವಾಗಿ ಮಾತನಾಡಿದ ಅವರು, ನನಗೆ ಅಷ್ಟೊಂದು ವಿಷಯ ಗೊತ್ತಿಲ್ಲ. ಅದರಲ್ಲಿ ಕಾನೂನು ಅಡೆ ತಡೆಗಳಿವೆ. ಅದರ ಬಗ್ಗೆ ನಾನು ವೈಯಕ್ತಿಕವಾಗಿ ಏನು ಹೇಳಲು ಸಾಧ್ಯವಿಲ್ಲ. ನಮ್ಮ ಸರ್ಕಾರವು 2ಎ ಮೀಸಲಾತಿ ವಿಚಾರಕ್ಕೆ ಚಿಂತನೆ ನಡೆಸಿದೆ. ನಾನು ಸಿಎಂ ಜೊತೆ ಈ ವಿಚಾರವಾಗಿ ಮಾತನಾಡುತ್ತೇನೆ. ಶೀಘ್ರವೇ ತೊಡಕು ನಿವಾರಣೆಯಗುತ್ತದೆ ಎಂದರು.