ಹುಬ್ಬಳ್ಳಿ: ನಾವು ನೀಡುತ್ತಿರುವ ತ್ರಿಶೂಲ ಬಗ್ಗೆ ಯಾರು ಭಯ ಪಡಬೇಡಿ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ತ್ರಿಶೂಲ ದೀಕ್ಷೆ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಮೋದ್ ಮುತಾಲಿಕ್, ಆಯುಧ ಪೂಜೆ ದಿನ ಮನೆಯಲ್ಲಿ ತಲವಾರ ಪೂಜೆ ಮಾಡಬೇಕು.
ಆದರೆ, ಇಂದು ಪುಸ್ತಕ ಪೆನ್ನು ಇಟ್ಟು ಪೂಜೆ ಮಾಡುತ್ತಿದ್ದೇವೆ. ದುರ್ಗಾಮಾತೆಯ ಕೈಯಲ್ಲಿ ಹತ್ತು ಶಸ್ತ್ರಗಳಿವೆ. ಈಶ್ವರನ ಕೈಯಲ್ಲಿ ತ್ರಿಶೂಲವಿದೆ. ಅದನ್ನೇ ಮಹಿಳೆಯರ ಕೈಗೆ ಕೊಡುತ್ತಿದ್ದೇವೆ. ಮುಂದಿನ ಆಯುಧ ಪೂಜೆ ದಿನ ಹರಿತವಾದ ತಲವಾರ ಇಟ್ಟು ಪೂಜೆ ಮಾಡಿ ಎಂದು ಹೇಳಿದರು. ನಾವು ನೀಡುತ್ತಿರುವ ತ್ರಿಶೂಲ ಬಗ್ಗೆ ಯಾರು ಭಯ ಪಡಬೇಡಿ.
ಹಿಡಿಕೆ ಬಿಟ್ಟು ಆರು ಇಂಚು ಉದ್ದ ಇದ್ದರೇ ಅದು ಆಯುಧವಾಗುತ್ತದೆ. ಆದರೆ, ನಾವು ನೀಡುತ್ತಿರುವುದು ಮೂರು ಇಂಚಿನ ತ್ರಿಶೂಲ. ಯಾರಾದರು ಕೇಳಿದರೆ, ಮೊದಲು ಅವರಿಗೆ ಚುಚ್ಚಿಬಿಡಿ. ಪೊಲೀಸರು ಬಂದೂಕಿಗೆ ಪೂಜೆ ಮಾಡುತ್ತಾರೆ. ಹೀಗಾಗಿ, ನಾವು ಯಾಕೆ ತ್ರಿಶೂಲ ಇಟ್ಟುಕೊಳ್ಳಲು ಭಯ ಪಡಬೇಕು ಎಂದರು.