ಸದೃಢವಾದ ದೇಹಕ್ಕೆ ಕ್ರೀಡೆಗಳು ಅತ್ಯಗತ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ವಿದ್ಯಾದಾನ ಸಮಿತಿಯ ಶ್ರೀಮತಿ ಎಂ.ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯ ಹಾಗೂ ಭಾರತ ಸರಕಾರದ ನೆಹರು ಯುವ ಕೇಂದ್ರ ಗದಗ ಇವರ ಸಂಯುಕ್ತಾಶ್ರಯದಲ್ಲಿ ಎಂ.ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

Advertisement

ವಿದ್ಯಾದಾನ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಕ್ರೀಡಾಜ್ಯೋತಿಯನ್ನು ಬರಮಾಡಿಕೊಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿ, ಪ್ರಶಿಕ್ಷಣಾರ್ಥಿಗಳು ಕೇವಲ ಪಠ್ಯ ಚಟುವಟಿಕೆಗಳಲ್ಲಷ್ಟೇ ಅಲ್ಲದೆ ಕ್ರೀಡೆಯಲ್ಲೂ ತಮ್ಮ ಪ್ರಾವಿಣ್ಯವನ್ನು ಮೆರೆಯಬೇಕು. ಸದೃಢವಾದ ದೇಹ ರಚನೆಗೆ ಕ್ರೀಡೆಗಳು ಅತ್ಯಗತ್ಯ. ಪ್ರತಿಯೊಬ್ಬರೂ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ನೆಹರು ಯುವ ಕೇಂದ್ರದ ಕ್ರೀಡಾ ಆಯೋಜಕರಾದ ಎನ್. ರಂಜನಿ ಮಾತನಾಡಿ, ಕ್ರೀಡೆಯು ಪ್ರತಿಯೊಬ್ಬರ ಜೀವನಕ್ಕೂ ಅತ್ಯಗತ್ಯ. ಎಲ್ಲರೂ ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿ ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ ಶುಭ ಹಾರೈಸಿದರು.

ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ ಮಾತನಾಡಿ, ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಬೇಕು. ಸದೃಢ ದೇಹಕ್ಕೆ ಕ್ರೀಡೆಗಳು ತುಂಬಾ ಸಹಾಯಕಾರಿ. ಹಾಗಾಗಿ ಎಲ್ಲಾ ಪ್ರಶಿಕ್ಷಣಾರ್ಥಿಗಳು ಅಭ್ಯಾಸದ ಜೊತೆ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸಿ ಮಾನಸಿಕ, ಬೌದ್ಧಿಕ ವಿಕಾಸವನ್ನು ಪಡೆದುಕೊಂಡು ಭಾರತದ ಸದೃಢ ಪ್ರಜೆಗಳಾಗಬೇಕು ಎಂದು ತಿಳಿಸಿದರು.

ನೆಹರು ಯುವ ಕೇಂದ್ರದ ಕಾರ್ಯಕ್ರಮ ಸಂಯೋಜಕರಾದ ರವಿಕುಮಾರ ಹೊಂಬಾಳಿ, ಮಹಾವಿದ್ಯಾಲಯದ ದೈಹಿಕ ಶಿಕ್ಷಕರಾದ ರಮೇಶ ಲಮಾಣಿ ಮಾರ್ಗದರ್ಶನ ನೀಡಿದರು. ಪ್ರಶಿಕ್ಷಣಾರ್ಥಿಗಳಾದ ದೀಪಕ, ಆಫ್ರೀನ್, ಮಂಜುನಾಥ, ಅಭಿಷೇಕ, ಹಜರತ್ ಕ್ರೀಡಾಜ್ಯೋತಿಯನ್ನು ಹೊತ್ತು ತಂದರು.

ವೇದಿಕೆಯ ಮೇಲೆ ಮಹಾವಿದ್ಯಾಲಯದ ವಿದ್ಯಾರ್ಥಿ ಪ್ರತಿನಿಧಿ ಬಸವರಾಜ ಮೂದ್ಲಗುಂದಿ, ಕ್ರೀಡಾ ಮಂತ್ರಿ ಸುರೇಶ ನಾಯಕ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು. ಪ್ರಶಿಕ್ಷಣಾರ್ಥಿ ಜ್ಯೋತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸವಿತಾ ಸ್ವಾಗತಿಸಿದರು. ವೀಣಾ ನಿರೂಪಿಸಿದರು. ಬೃಂದಾ ವಂದಿಸಿದರು.


Spread the love

LEAVE A REPLY

Please enter your comment!
Please enter your name here