ಎ.25ರಂದು ರೈಲ್ವೆ ಮಾರ್ಗಕ್ಕಾಗಿ ಹೋರಾಟ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಮುಂಡರಗಿ-ಹರಪನಹಳ್ಳಿ ರೈಲ್ವೆ ಮಾರ್ಗಕ್ಕೆ ಒತ್ತಾಯಿಸಿ ಎಪ್ರಿಲ್ 25ರಂದು ಮುಂಡರಗಿಯಿಂದ ಗದಗವರೆಗೆ ರೈಲ್ವೆ ಎಂಜಿನ್ ಚಿತ್ರದ ಅಣುಕು ಪ್ರದರ್ಶನದ ವಿನೂತನ ಹೋರಾಟ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮುಂಡರಗಿ ತಾಲೂಕು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ದೇಸಾಯಿ ಹೇಳಿದರು.

Advertisement

ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎ. 25ರಂದು ಬೆಳಿಗ್ಗೆ ಮುಂಡರಗಿಯ ಗಣೇಶ ದೇವಸ್ಥಾನದಿಂದ ಯಾತ್ರೆ ಆರಂಭವಾಗಲಿದೆ. ಮಧ್ಯಾಹ್ನ 2 ಗಂಟೆಗೆ ಗದಗ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ರೈಲ್ವೆ ನಿಲ್ದಾಣಕ್ಕೆ ತೆರಳಿ, ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಆನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ, ಕೇಂದ್ರ ರೈಲ್ವೆ ಸಚಿವರು, ರಾಜ್ಯ ರೈಲ್ವೆ ಸಚಿವರು ಹಾಗೂ ಸಂಸದರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ಹೋರಾಟಕ್ಕೆ ರೈತರು, ದಲಿತ ಪರ ಸಂಘಟನೆಗಳು, ಬೀದಿ ಬದಿ ವ್ಯಾಪಾರಸ್ಥರು, ಕಾರ್ಮಿಕರು, ಮಹಿಳಾ ಒಕ್ಕೂಟದ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಇದೊಂದು ಪಕ್ಷಾತೀತ ಹೋರಾಟವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿದರು.

2014ರಲ್ಲಿ ಡಿ.ವಿ. ಸದಾನಂದಗೌಡ ರೈಲ್ವೆ ಖಾತೆ ಮಂತ್ರಿಯಾಗಿದ್ದಾಗ ಗದಗ-ಮುಂಡರಗಿ- ಹರಪನಹಳ್ಳಿ ರೈಲ್ವೆ ಮಾರ್ಗಕ್ಕೆ ಅನುಮೋದನೆ ಕೊಟ್ಟಿದ್ದರು. ಆದರೆ ಮುಂದೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಆ ಯೋಜನೆ ನನೆಗುದಿಗೆ ಬಿದ್ದಿದೆ. ಈ ಮಾರ್ಗದ ಅನುಷ್ಠಾನದಿಂದ ಈ ಭಾಗದ ವ್ಯಾಪಾರ, ವಾಣಿಜ್ಯ ಮತ್ತು ಪ್ರವಾಸೋದ್ಯಮ ಬೆಳವಣಿಗೆಯಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎಲ್. ನಾರಾಯಣಸ್ವಾಮಿ, ಶಿವರಾಜ ಹೊಸಕೋಟಿ, ಈರಮ್ಮ ತಾಳಿಕೋಟಿ, ಲೋಹಿತಕುಮಾರ ಕಾಸಾರ, ಮುತ್ತಣ್ಣ ಪವಾಡಶೆಟ್ಟಿ, ವಾದಿರಾಜ ಕೌಜಲಗಿ, ಶ್ರೀಪಾದ ತಮ್ಮಣ್ಣವರ ಉಪಸ್ಥಿತರಿದ್ದರು.

ಶ್ರೀರಾಮ ಸೇನೆ ಮುಖಂಡ ರಾಜು ಖಾನಪ್ಪನವರ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದವರು. ಪ್ರಧಾನಿ ಮೋದಿಯವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಹೀಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನೂತನ ರೈಲ್ವೆ ಮಾರ್ಗದ ಅನುಷ್ಠಾನಕ್ಕೆ ಪ್ರಯತ್ನಿಸಬೇಕು. ರೈಲ್ವೆ ಹೋರಾಟಕ್ಕೆ ಶ್ರೀರಾಮ ಸೇನೆ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.


Spread the love

LEAVE A REPLY

Please enter your comment!
Please enter your name here