ವಿಜಯಸಾಕ್ಷಿ ಸುದ್ದಿ, ಧಾರವಾಡ
ಸದ್ಯ ಕೊರೊನಾ ಹಾವಳಿ ವಿಪರೀತ ಹೆಚ್ಚಾಗುತ್ತಿದೆ. ಇಲ್ಲಿಯವರೆಗೆ ವೈದ್ಯರು, ಸಿಬ್ಬಂದಿಯಲ್ಲಿಯೂ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಆದರೆ, ಈಗ ಅದರ ಸಂಖ್ಯೆಯಲ್ಲಿಯೂ ಗಣನೀಯ ಹೆಚ್ಚಳ ಕಂಡು ಬರುತ್ತಿದ್ದು, ಹೀಗೆ ಮುಂದುವರೆದರೆ ರೋಗಿಗಳಿಗೆ ಚಿಕಿತ್ಸೆ ನೀಡುವುದು ಹೇಗೆ ಎಂದು ಎಲ್ಲರೂ ಚಿಂತೆಗೆ ಈಡಾಗಿದ್ದಾರೆ.
ನಗರದಲ್ಲಿನ ಜಿಲ್ಲಾ ಆಸ್ಪತ್ರೆಯ 6 ಜನ ವೈದ್ಯರು ಸೇರಿದಂತೆ ಬರೋಬ್ಬರಿ 34 ಜನ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 6 ಜನ ವೈದ್ಯರು, 15 ಜನ ಸ್ಟಾಫ್ ನರ್ಸ್, 3 ಜನ ಡಾಟಾ ಎಂಟ್ರಿ ಆಪರೇಟರ್, 4 ಜನ ಲ್ಯಾಬ್ ತಂತ್ರಜ್ಞರು, ತಲಾ ಇಬ್ಬರು ಫಿಸಿಯೋಥೆರಪಿಸ್ಟ್, ಕೌನ್ಸಿಲರ್ ಹಾಗೂ ಡಿ ಗ್ರೂಪ್ ನೌಕರರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಈ ಪೈಕಿ ಹಲವರು ಹೊಂ ಐಸೋಲೇಷನ್ ನಲ್ಲಿದ್ದಾರೆ. ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ನರ್ಸ್ ಗಳ ಕೊರತೆ ತಾಂಡವಾಡುತ್ತಿದೆ. ಇದ್ದ ನರ್ಸ್ಗಳನ್ನ ಬಳಸಿಕೊಂಡು ಜಿಲ್ಲಾ ಆಸ್ಪತ್ರೆ ಕೆಲಸ ಮುಂದುವರೆಸಿದೆ. ಇದು ಹೀಗೆ ಮುಂದುವರೆದರೆ, ವೈದ್ಯರು ಹಾಗೂ ನರ್ಸ್ ಗಳ ಕೊರತೆ ಇನ್ನೂ ಹೆಚ್ಚಾಗಿ ರೋಗಿಗಳಿಗೆ ತೊಂದರೆಯಾಗಬಹುದು. ಕೂಡಲೇ ಸರ್ಕಾರ ಮಧ್ಯೆ ಪ್ರವೇಶಿಸಿ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.