HomeIndia Newsತಾಯಿ ವಿರುದ್ಧದ ನಿಂದನೆಗೆ ಮೋದಿ ಭಾವುಕ ಪ್ರತಿಕ್ರಿಯೆ; ವಿಡಿಯೋ ಮೂಲಕ ಯುವಕರಿಗೆ ಹೇಳಿದ್ದೇನು?

ತಾಯಿ ವಿರುದ್ಧದ ನಿಂದನೆಗೆ ಮೋದಿ ಭಾವುಕ ಪ್ರತಿಕ್ರಿಯೆ; ವಿಡಿಯೋ ಮೂಲಕ ಯುವಕರಿಗೆ ಹೇಳಿದ್ದೇನು?

For Dai;y Updates Join Our whatsapp Group

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಕೂಗಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಕುರಿತು ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ.

ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಪ್ರಧಾನಿ ಮೋದಿ, “ಜಂತರ್ ಮಂತರ್‌ನಲ್ಲಿ ಏನಾಯಿತು ಎಂಬುದನ್ನು ದೇಶ ಮತ್ತು ಜಗತ್ತು ನೋಡಿದೆ. ಕೆಲವು ಕಿಡಿಗೇಡಿ ಮಕ್ಕಳು ನಾಗರಿಕ ಸಮಾಜಕ್ಕೆ ಒಪ್ಪದಂತಹ ಅತ್ಯಂತ ಅಸಭ್ಯ ಮತ್ತು ನಿಂದನಾತ್ಮಕ ಭಾಷೆಯನ್ನು ಬಳಸಿದ್ದಾರೆ. ನನ್ನನ್ನು ವೈಯಕ್ತಿಕವಾಗಿ ನಿಂದಿಸಲಾಯಿತು, ಅಷ್ಟೇ ಅಲ್ಲದೆ ನನ್ನ ದಿವಂಗತ ತಾಯಿಯನ್ನೂ ಬಿಡದೆ ನಿಂದಿಸಲಾಯಿತು. ನಮ್ಮ ಹೆಣ್ಣುಮಕ್ಕಳು ಇಂತಹ ಭಾಷೆ ಬಳಸಿರುವುದು ಇಡೀ ಸಮಾಜಕ್ಕೆ ಸಾಂಸ್ಕೃತಿಕ ಆಘಾತ ತಂದಿದೆ” ಎಂದು ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ.

“ಬಾಲ್ಯದಲ್ಲಿ ತಪ್ಪುಗಳು ನಡೆಯುವುದು ಸಹಜ, ಅದೇ ರೀತಿ ಆ ತಪ್ಪುಗಳನ್ನು ತಿದ್ದುಕೊಳ್ಳಲು ಬಾಲ್ಯದಲ್ಲೇ ಅವಕಾಶವೂ ಸಿಗುತ್ತದೆ. ಹೀಗಾಗಿ ಸಮಾಜದಲ್ಲಿ ಉಂಟಾಗಿರುವ ಆಕ್ರೋಶವನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲೆ. ಆದರೆ, ಈಗ ನಾವು ಆ ಮಕ್ಕಳನ್ನು ಅಪ್ಪಿಕೊಂಡು ಅವರಿಗೆ ಸರಿಯಾದ ದಾರಿಯನ್ನು ತೋರಿಸಬೇಕಾದ ಸಮಯ ಬಂದಿದೆ. ಅವರು ದಾರಿ ತಪ್ಪಿದ್ದಾರೆ, ಅವರನ್ನು ಸರಿಯಾದ ಹಾದಿಗೆ ತರುವುದು ನಮ್ಮ ಕರ್ತವ್ಯ” ಎಂದಿದ್ದಾರೆ.

ಅವರನ್ನು ಶಿಕ್ಷಿಸುವುದು, ಕೋರ್ಟ್‌ ಮೆಟ್ಟಿಲೇರಿಸುವುದು ಅಥವಾ ಸಮಾಜದಲ್ಲಿ ಕಿರುಕುಳ ನೀಡುವುದರಿಂದ ಪರಿಸ್ಥಿತಿ ಬದಲಾಗುವುದಿಲ್ಲ. ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ. ಸಮಾಜವೂ ಇದನ್ನು ಸ್ವೀಕರಿಸಬೇಕು. ಕೆಲವೊಮ್ಮೆ ನಮ್ಮ ನಾಲಿಗೆ ಹಲ್ಲಿನ ನಡುವೆ ಸಿಲುಕಿ ರಕ್ತ ಬರುತ್ತದೆ, ಹಾಗೆಂದು ನಾವು ಹಲ್ಲನ್ನು ಮುರಿದುಕೊಳ್ಳುವುದಿಲ್ಲವಲ್ಲ. ಏಕೆಂದರೆ ಹಲ್ಲು ಮತ್ತು ನಾಲಿಗೆ ಎರಡೂ ನಮ್ಮದೇ. ಅದೇ ರೀತಿ ಈ ಮಕ್ಕಳೂ ಸಹ ನಮ್ಮವರೇ” ಎಂದು ಭಾವುಕ ನಿದರ್ಶನ ನೀಡಿದ್ದಾರೆ.

“ದಾರಿ ತಪ್ಪಿದ ಯುವಜನತೆಗೆ ನೇರ ಕರೆ ನೀಡಿದ ಪ್ರಧಾನಿ, “ದಾರಿ ತಪ್ಪಿದವರನ್ನು ಸರಿ ದಾರಿಗೆ ತರುವುದು ಕಷ್ಟಕರ, ಆದರೆ ನಾವು ಆ ಕೆಲಸವನ್ನು ಮಾಡಲೇಬೇಕು. ಆದ್ದರಿಂದ ನಾನು ಈ ಮಕ್ಕಳಿಗೆ ಕರೆ ನೀಡುತ್ತಿದ್ದೇನೆ. , ದೇಶದ ಹಿತಕ್ಕಾಗಿ ನಾವೆಲ್ಲರೂ ಒಟ್ಟಾಗಿ ಮುನ್ನಡೆಯೋಣ. ಹೊಸದನ್ನು ಕಲಿಯೋಣ, ಮಾಡಿದ ತಪ್ಪುಗಳಿಂದಲೂ ಪಾಠ ಕಲಿಯೋಣ. ದೇಶವು ವೇಗವಾಗಿ ಮುನ್ನಡೆಯುತ್ತಿದ್ದು, ನಿಮ್ಮ ಕನಸುಗಳನ್ನೂ ಈಡೇರಿಸಿಕೊಳ್ಳಿ. ನಾನು ನಿಮಗಾಗಿಯೇ ಜೀವಿಸುತ್ತಿದ್ದೇನೆ, ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ನನ್ನನ್ನು ಮುಡಿಪಾಗಿಟ್ಟಿದ್ದೇನೆ” ಎಂದು ಹೇಳಿ ತಮ್ಮ ಮಾತನ್ನು ಕೊನೆಗೊಳಿಸಿದ್ದಾರೆ.

ನೋಯ್ಡಾ ಯುವತಿಯ ಮೇಲೆ ಎಫ್‌ಐಆರ್:

ನೋಯ್ಡಾ ನಿವಾಸಿ, 25 ವರ್ಷದ ರುಚಿಕಾ ಸಿಂಗ್ ಎಂಬುವವರ ವಿರುದ್ಧ ಪೊಲೀಸ್ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಪ್ರಧಾನಿಯವರ ಈ ಸಂದೇಶ ಹೊರಬಿದ್ದಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪ್ರಧಾನಿ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ರುಚಿಕಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಘಾಜಿಯಾಬಾದ್ ಮೂಲದ ವಕೀಲರೊಬ್ಬರು ನೀಡಿದ ದೂರಿನ ಮೇರೆಗೆ, ನೋಯ್ಡಾ ಎಕ್ಸ್‌ಪ್ರೆಸ್‌ವೇ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆಗಾಗಿ ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img