ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಸಮರ್ಪಕವಲ್ಲದ ವೆಂಟಿಲೇಟರ್ ಗಳನ್ನು ಸರಬರಾಜು ಮಾಡಲಾಗಿದ್ದು, ಕಳೆದ ಒಂದು ವಾರವಾದರೂ ಸೇವೆಗೆ ಸಿಗುತ್ತಿಲ್ಲ. ಅಲ್ಲದೇ, ವೆಂಟಿಲೇಟರ್ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಸಚಿವ, ಗದಗ ಶಾಸಕ ಎಚ್.ಕೆ. ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ಸರಿಯಾದ ಕನೆಕ್ಟರ್ ಇಲ್ಲ, ಆಕ್ಸಿಜನ್ ಸೆನ್ಸಾರ್ ಇಲ್ಲ. ಹೀಗಾಗಿ ಡಬ್ಬಾ ವೆಂಟಿಲೇಟರ್ ಗಳು ಹಾಗೆಯೇ ಬಿದ್ದಿವೆ. ಇಂತಹ ವೆಂಟಿಲೇಟರ್ ಗಳನ್ನು ಇಟ್ಟುಕೊಂಡ ಸಂದರ್ಭದಲ್ಲಿ ಸೋಂಕಿತರು ಹೆಚ್ಚಾಗಿ ದಾಖಲಾದರೆ ಪರಿಸ್ಥಿತಿ ತೀರಾ ಹದಗೆಡುತ್ತದ ಎಂದು ಕಿಡಿಕಾರಿದ್ದಾರೆ.
ಕಳಪೆ ಗುಣಮಟ್ಟದ ವೆಂಟಿಲೇಟರ್ ಖಾಲಿ ಡಬ್ಬಿಗಳಾಗಿವೆ. ಇವುಗಳಿಂದಲೇ ರಾಜ್ಯದಲ್ಲಿ ನೂರಾರು ಜನ ಸಾಯುತ್ತಿದ್ದಾರೆ. ಪಿಎಂ ಕೇರ್ ಮುಖಾಂತರ ಡಬ್ಬಾ ವೆಂಟಿಲೇಟರ್ ಖರೀದಿ ಮಾಡಲಾಗಿದೆ. ಇಂತಹ ಕಳಪೆ ವೆಂಟಿಲೇಟರ್ ನೀಡಿ ಜನರ ಜೀವ ತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ರೀತಿಯಾಗಿ ಅಮಾನವೀಯ ಭ್ರಷ್ಟಾಚಾರ ನಡೆದಿದೆ. ಇಂತಹ ಭ್ರಷ್ಟಾಚಾರದ ಮೂಲಕ ಜನರ ಜೀವ ಬಲಿ ಪಡೆಯಲಾಗುತ್ತಿದೆ. ಇದು ಸರ್ಕಾರದ ಕೊಲೆ. ಜನರ ಪ್ರತಿಯೊಂದು ಸಾವಿಗೂ ಸರ್ಕಾರವೇ ನೇರ ಹೊಣೆ. ಕೂಡಲೇ ಕಳಪೆ ವೆಂಟಿಲೇಟರ್ ಖರೀದಿ ಮಾಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ದೇಶ ವ್ಯಾಪಿ ವೆಂಟಿಲೇಟರ್ ನಲ್ಲಿ ಭ್ರಷ್ಟಾಚಾರ ನಡೆದಿರುವುದರಿಂದ ಉಚ್ಛ ನ್ಯಾಯಾಲಯ ಸಿಬಿಐ ತನಿಖೆಗೆ ಆದೇಶ ಮಾಡಬೇಕು ಎಂದು ಎಚ್ ಕೆ ಪಾಟೀಲ್ ಒತ್ತಾಯ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ವಾಸಣ್ಣ ಕುರಡಗಿ, ಗುರಣ್ಣ ಬಳಗಾನೂರು, ಪ್ರಭು ಬುರಬುರೆ, ಅಶೋಕ್ ಮಂದಾಲಿ, ಸಿದ್ದಲಿಂಗೇಶ್ವರ ಪಾಟೀಲ್, ಬಸವರಾಜ್ ಕಡೆಮನಿ, ಉಮರ್ ಫಾರೂಕ್ ಹುಬ್ಬಳ್ಳಿ, ಸರ್ಫರಾಜ್ ಬಬರ್ಚಿ ಸೇರಿದಂತೆ ಮತ್ತೀತರು ಉಪಸ್ಥಿತರಿದ್ದರು.