ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಮುಂಡರಗಿ-ಹಡಗಲಿ ಹೊಸ ರೈಲು ಮಾರ್ಗವನ್ನು ಶೀಘ್ರ ಪ್ರಾರಂಭಿಸಲು ಆಗ್ರಹಿಸಿ ರೈಲ್ವೆ ಇಂಜಿನ್ ಸ್ಥಬ್ಧಚಿತ್ರ ಮೆರವಣಿಗೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಂಡರಗಿ ತಾಲೂಕಾ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಎಸ್.ದೇಸಾಯಿ ನೇತೃತ್ವದಲ್ಲಿ ಮುಂಡರಗಿ ತಹಸೀಲ್ದಾರರು, ರೈಲ್ವೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ಬಸವರಾಜ ದೇಸಾಯಿ ಮಾತನಾಡಿ, ಹೊಸ ರೈಲು ಮಾರ್ಗಕ್ಕಾಗಿ ಗದಗ-ಹರಪನಹಳ್ಳಿ-ಮುಂಡರಗಿ-ಹೂವಿನಹಡಗಲಿ ಸಾರ್ವಜನಿಕರು ಕಳೆದ 15 ವರ್ಷಗಳಿಂದ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆದರೂ ನಮ್ಮ ಬೇಡಿಕೆ ಈಡೇರಿಲ್ಲ. ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಹೊಸ ರೈಲು ಮಾರ್ಗದ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಎಲ್. ನಾರಾಯಣಸ್ವಾಮಿ, ವಾದಿರಾಜ ಕೌಜಲಗಿ, ಲೋಹಿತ ಕಾಸರ, ಗವಿಸಿದ್ದಪ್ಪ ಬನ್ನಿಕೊಪ್ಪ, ಬಸವರಾಜ ನವಲಗುಂದ, ಬಸಪ್ಪ ಬಂಡಿ, ನಾಗರಾಜ ಹೊಂಬಳಗಟ್ಟಿ, ರಾಜಾಭಕ್ಷಿ ಬೆಟಗೇರಿ, ಸಂತೋಷ ಹಿರೇಮನಿ, ಪವನ ಮೇಟಿ, ಈರಮ್ಮ ತಾಳಿಕೋಟಿ, ರಶ್ಮಿ ಹಂಚಿನಾಳ, ಜಾನಕಿ ರೋಣದ, ಜ್ಯೋತಿ ರೋಣದ, ಐಶ್ವರ್ಯ ಪೂಜಾರ, ಸಚಿನ್ ಕುಮಾರ ದೇಸಾಯಿ, ಸಂಜಯ ರಂಗಣ್ಣವರ ಸೇರಿದಂತೆ ಮುಂಡರಗಿ ತಾಲೂಕಿನ ಗ್ರಾಮಸ್ಥರು, ರೈತರು, ಹಲವು ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.