ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಅಮಾನುಷ ದಾಳಿಯನ್ನು ನರೇಗಲ್ಲದ ವಿವಿಧ ಸಂಘಟನೆಗಳು ಬಲವಾಗಿ ಖಂಡಿಸಿವೆ. ನರೇಗಲ್ಲ ಪಟ್ಟಣ ಅಭಿವೃದ್ಧಿ ಸಮಿತಿಯ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಟ್ಟಣದ ಸಂತೆ ಬಜಾರದಲ್ಲಿನ ಗಣೇಶ ದೇವಸ್ಥಾನದಿಂದ ಬಸ್ ನಿಲ್ದಾಣದವರೆಗೆ ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ನಡೆಸಲಾಯಿತು. ನಂತರ ಬಸ್ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ, ಉಗ್ರರ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.
ಈ ಸಂದರ್ಭದಲ್ಲಿ ಮಂಜುನಾಥ ಹೆಗಡೆ ಮಾತನಾಡಿ, ದೇಶದಲ್ಲಿ ಆಂತರಿಕ ಭದ್ರತೆ ಸಾಕಷ್ಟು ಬಿಗಿಯಾಗಿದೆ. ಆದರೂ ಉಗ್ರರು ನುಸುಳಿ ಪ್ರವಾಸಿಗರನ್ನು ಕೊಂದಿರುವುದು ಖೇದನೀಯ. ಈ ಉಗ್ರರಿಗೆ ಅತ್ಯುಗ್ರವಾದ ಶಿಕ್ಷೆ ನೀಡಿ ಸಂಹರಿಸಬೇಕಿದೆ ಎಂದರು.
ಪಟ್ಟಣ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವನಗೌಡ ಪಾಟೀಲ ಮಾತನಾಡಿ, ಇಂತಹ ಉಗ್ರ ಕೃತ್ಯಗಳಿಗೆ ಪಾಕಿಸ್ತಾನ ಯಾವಾಗಲೂ ಬೆಂಗಾವಲಾಗಿ ನಿಂತಿದೆ. ಈ ಕೃತ್ಯದಲ್ಲಿ ಪಾಕಿಸ್ತಾನದ ಕೈವಾಡ ಇರುವುದು ಜಗಜ್ಜಾಹೀರಾಗಿದೆ. ಆದ್ದರಿಂದ ಪಾಕಿಸ್ತಾನಕ್ಕೂ ಸರಿಯಾದ ಪಾಠ ಕಲಿಸಬೇಕಾದ ಸಮಯ ಈಗ ಬಂದಿದೆ ಎಂದರು.
ನಿವೃತ್ತ ಯೋಧ ಶಿವಪುತ್ರಪ್ಪ ಸಂಗನಾಳ ಮಾತನಾಡಿ, ಮೊದಲು ಕಾಶ್ಮೀರಿ ಜನರ ಮನಸ್ಥಿತಿ ಬದಲಾಗಬೇಕಿದೆ. ಉಗ್ರರನ್ನು ಬೆಂಬಲಿಸವುದನ್ನು ಅವರು ನಿಲ್ಲಿಸಬೇಕು. ಅದಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಈಗಾಗಲೇ ಕಾರ್ಯೋನ್ಮುಖವಾಗಿದೆ. ಈ ಸಮಯದಲ್ಲಿ ಅವರನ್ನು ಬೆಂಬಲಿಸವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ರೈತ ಸೇನೆಯ ಶರಣಪ್ಪ ಧರ್ಮಾಯತ ಮಾತನಾಡಿ, ಉಗ್ರರಿಗೆ ಮತ್ತು ಅವರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನಕ್ಕೆ ಚುರುಕು ಮುಟ್ಟಿಸುವ ಕಾರ್ಯ ಮಾಡಬೇಕು. ಕೇಂದ್ರ ಸರಕಾರದ ಯಾವುದೇ ಕ್ರಮಕ್ಕೂ ದೇಶದ ಎಲ್ಲ ರೈತರ ಮತ್ತು ಸಾರ್ವಜನಿಕರ ಬೆಂಬಲ ಇದ್ದೇ ಇದೆ ಎಂದರು.