ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ಉತ್ತರ ಕರ್ನಾಟಕದ, ಅದರಲ್ಲೂ ಗದಗ ಜಿಲ್ಲೆಯಲ್ಲಿ ಕೈಗಾರಿಕೆಗಳು ಹಾಗೂ ಫ್ಯಾಕ್ಟರಿಗಳು ಇಲ್ಲ್ಲದಿರುವ ಕಾರಣ ಸ್ಥಳೀಯರು, ಯುವಕರು ಉದ್ಯೋಗವನ್ನು ಅರಸಿಕೊಂಡು ಬೆಂಗಳೂರು, ಮುಂಬಯಿ, ಪುಣೆ ಇತ್ಯಾದಿ ಮಹಾನಗರಗಳತ್ತ ಮುಖ ಮಾಡುತ್ತಿದ್ದಾರೆ. ನಮ್ಮ ಜನರು ತುತ್ತಿನ ಚೀಲ ತುಂಬಿಕೊಳ್ಳಲು ಜಾತ್ರೆ, ಉತ್ಸವ, ಸಂತೆಗಳ ಮೇಲೆ ಅವಲಂಬಿತರಾಗಿದ್ದಾರೆ. ಮೊಬೈಲ್ ಕವರ್, ಪಾದರಕ್ಷೆ, ಮಕ್ಕಳ ಬಟ್ಟೆ ಹಾಗೂ ವಿವಿಧ ದಿನೋಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತ ಜೀವನವನ್ನು ಸಾಗಿಸುತ್ತಿದ್ದಾರೆ.
ಆದರೆ, ಗದಗ ತೋಂಟದಾರ್ಯ ಮಠದ ರಥ ಬೀದಿಯಲ್ಲಿ 40ರಿಂದ 60 ದಿನಗಳ ಕಾಲ ಅನ್ಯ ರಾಜ್ಯದ ವ್ಯಾಪಾರಸ್ಥರು ಬಂದು ಸಾರ್ವಜನಿಕರ ರಸ್ತೆಯಲ್ಲಿ ಅನಧಿಕೃತ ಹಾಗೂ ತಾತ್ಕಾಲಿಕವಾಗಿ ಅಂಗಡಿಗಳನ್ನು ನಿರ್ಮಾಣ ಮಾಡಿ ವ್ಯವಹರಿಸಿ ನಮ್ಮವರ ಹೊಟ್ಟೆ ಮೇಲೆ ಕಲ್ಲು ಹಾಕುತ್ತಿರುವುದು ಖಂಡನೀಯ. ನಮ್ಮ ನೆಲ-ಜಲ-ಭಾಷೆ ವಿರೋಧಿಸುತ್ತಿರುವ ಅನ್ಯ ಧರ್ಮದ ಹಾಗೂ ಅನ್ಯ ರಾಜ್ಯದ ವ್ಯಾಪಾರಸ್ಥರಿಗೆ ವ್ಯಾಪಾರ ವಹಿವಾಟು ನಡೆಸಲು ಗದಗ-ಬೆಟಗೇರಿ ನಗರ ಸಭೆ ಅವಕಾಶ ನೀಡುತ್ತಿದೆ.
ಮಾರಾಟ ಮಳಿಗೆಗಳಿಂದ ನಗರಸಭೆಗೆ ಹಾಗೂ ಸರ್ಕಾರಕ್ಕೆ ಯಾವುದೇ ರೀತಿಯ ತೆರಿಗೆ ಸಂಗ್ರಹಣೆ ಆಗದೆ ಅವರು ಬಿಸಾಡುತ್ತಿರುವ ಕಸದಿಂದ ಪೌರಕಾರ್ಮಿಕರಿಗೆ ಪ್ರತಿ ನಿತ್ಯ ಹೆಚ್ಚುವರಿ ಕೆಲಸವಾಗಿದೆ. ಜೊತೆಗೆ ರಾಸಾಯನಿಕ ಬಣ್ಣ ಹಾಗೂ ಹಾನಿಕಾರಕ ವಸ್ತುಗಳನ್ನು ಬಳಸಿ ಆಹಾರವನ್ನು ತಯಾರಿಸಿ ನೀಡುತ್ತಿರುವುದರಿಂದ ಜನರ ಆರೋಗ್ಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವುದನ್ನು ಮನಗಂಡು, ಸ್ಥಳೀಯರ ಹಾಗೂ ಬೀದಿ ಬದಿ ವ್ಯಾಪಾರಸ್ಥರ ಉದ್ಯೋಗಕ್ಕೆ ಬೆನ್ನೆಲುಬಾಗಿ ನಿಲ್ಲಲು ಹಾಗೂ ಆ ರಸ್ತೆಯಲ್ಲಿ ಸಂಚಾರ ವ್ಯವಸ್ಥೆಯನ್ನು ಸುಲಭಗೊಳಿಸಿ ಸಾರ್ವಜನಿಕರಿಗೆ ಹಾಗೂ ದ್ವಿಚಕ್ರ ಸವಾರರ ಅನುಕೂಲಕ್ಕಾಗಿ ಆಗ್ರಹಿಸಿ ಮೇ. 10ರಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಶ್ರೀರಾಮ ಸೇನಾ ಮತ್ತು ವಿವಿಧ ದಲಿತ, ಕನ್ನಡ ಹಾಗೂ ಹಿಂದೂ ಪರ ಸಂಘಟನೆಗಳ ಸಹಕಾರದೊಂದಿಗೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದೆಂದು ಶ್ರೀರಾಮ ಸೇನಾ ಗದಗ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಕುಮಾರ ಮಿಟ್ಟಿಮಠ ಪತ್ರಿಕಾ ಪ್ರಕಟಣೆ ಮೂಲಕ ತಿಳಿದ್ದಾರೆ.