ವಿಜಯಸಾಕ್ಷಿ ಸುದ್ದಿ, ಗದಗ: ಸಾಮಾನ್ಯವಾಗಿ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಗೊಳಿಸುವಂತೆ ಸರ್ಕಾರಗಳು ಚುನಾಯಿತ ಪ್ರತಿನಿಧಿಗಳಿಗೆ ನಿರ್ದೇಶನ ನೀಡುತ್ತವೆ. ಆದರೆ ಓರ್ವ ನಿವೃತ್ತ ಸರ್ಕಾರಿ ಅಧಿಕಾರಿಗಳಾಗಿ ಈ ಕಲ್ಯಾಣಕಾರ್ಯಕ್ಕೆ ಮುಂದಾಗಿರುವ ರವಿ ಗುಂಜೀಕರರಲ್ಲಿ ಚುನಾಯಿತ ಪ್ರತಿನಿಧಿಗಳ ಕರ್ತವ್ಯಬದ್ಧತೆಯನ್ನು ಕಾಣಬಹುದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ ನುಡಿದರು.
ಅವರು ಸೋಮವಾರ ಇಲ್ಲಿನ ವೀರನಾರಾಯಣ ದೇವಸ್ಥಾನದ ಹತ್ತಿರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾಜಿ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ರವಿ ಗುಂಜೀಕರರ ನಿವೃತ್ತಿ ಅಂಗವಾಗಿ ಅವರು ಪ್ರಾಥಮಿಕ ಶಿಕ್ಷಣ ಪೂರೈಸಿದ ಸರ್ಕಾರಿ ಹಿರಿಯ ಕನ್ನಡ ಗಂಡುಮಕ್ಕಳ ಶಾಲೆ ನಂ.2ರ ದತ್ತು ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ನೌಕರರ ಸಾಂಕೇತಿಕ ನಿವೃತ್ತಿ ಕಾರ್ಯಕ್ರಮಗಳನ್ನು ಸಾಕಷ್ಟು ನೋಡಿದ್ದೇನೆ. ಆದರೆ ರವಿ ಗುಂಜೀಕರರಂತೆ ತಮ್ಮ ನಿವೃತ್ತಿಯನ್ನು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸಾರ್ಥಕಗೊಳಿಸಿದ ನಿದರ್ಶನಗಳು ಇದ್ದಂತಿಲ್ಲ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರರು ಮೇಲಧಿಕಾರಿಗಳ, ಸಾರ್ವಜನಿಕರ ಹಾಗೂ ಚುನಾಯಿತ ಪ್ರತಿನಿಧಿಗಳ ಒತ್ತಡದಿಂದ ಬೇಸತ್ತು ನಿವೃತ್ತಿಯಾದರೆ ಸಾಕೆಂಬ ಮನೋಭಾವ ತಲುಪಿದ್ದಾರೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಒಂದೂ ಕಪ್ಪುಚುಕ್ಕೆಯಿಲ್ಲದಂತೆ ವೃತ್ತಿ ಬದುಕನ್ನು ಪೂರೈಸಿ ನಿವೃತ್ತಿಯಲ್ಲೂ ಮಾದರಿಯಾಗಿರುವ ರವಿ ಗುಂಜೀಕರರ ನಿವೃತ್ತಿ ಜೀವನ ಸಮಾಜಮುಖಿಯಾಗಿರಲಿ ಎಂದು ಹಾರೈಸಿದರು.
ಹಿರಿಯರಾದ ಜಿ.ಎಸ್. ಹಿರೇಮಠ ಮಾತನಾಡಿ, ಇಲ್ಲಿ ಹೆಣ್ಣಮಕ್ಕಳ ಹಾಗೂ ಗಂಡುಮಕ್ಕಳ ಶಾಲೆಗಳು ಪ್ರತ್ಯೇಕವಾಗಿ ನಡೆಯುತ್ತಿದ್ದು, ಎರಡೂ ಬಡಮಕ್ಕಳ ಶಾಲೆಗಳಾಗಿವೆ. ರವಿ ಗುಂಜೀಕರ ಅವರು ಎರಡೂ ಶಾಲೆಗಳ ಅಭಿವೃದ್ಧಿಗೂ ನೆರವಾಗಬೇಕು ಎಂದು ಮನವಿ ಮಾಡಿದರು.
ಶಾಲಾ ಶಿಕ್ಷಕರ ಸಂಘಟನೆಗಳು ಹಾಗೂ ಗಂಡುಮಕ್ಕಳ ಸರ್ಕಾರಿ ಶಾಲೆ ನಂ.2ರ ವತಿಯಿಂದ ರವಿ ಗುಂಜೀಕರ ಹಾಗೂ ನೂತನ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಬಸವರಾಜ ಬಳ್ಳಾರಿ ಅವರನ್ನು ಸನ್ಮಾನಿಸಲಾಯಿತು.
ಚಾಂದಸಾಬ ಕೊಟ್ಟೂರ ಹಾಗೂ ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಗರಸಭೆ ಸದಸ್ಯೆ ಮುಲ್ಲಾ, ಅರುಣಕುಮಾರ ಚವ್ಹಾಣ, ವಿ.ಎಂ. ಹಿರೇಮಠ, ಗ್ರಾಮೀಣ ಬಿಇಓ ನಡುವಿನಮನಿ, ಕಾಸಿಮಸಾಬ ತಹಸೀಲ್ದಾರ, ಆರ್.ವ್ಹಿ. ಸಂಕಣ್ಣವರ, ಉಮೇಶ ಹಿರೇಮಠ, ಸುರೇಶ ಕೊಪ್ಪದ, ಶಿವಯೋಗಿ ಬಂಡಿ, ಶಾಲೆಯ ಪ್ರಧಾನ ಶಿಕ್ಷಕಿ ಎಫ್.ಎ. ದಲಬಂಜನ, ಪಿ.ಎ. ಕಣಾಜ, ಐ.ಕೆ. ಕಮ್ಮಾರ ಸೇರಿದಂತೆ ರವಿ ಗುಂಜೀಕರ ಅಭಿಮಾನಿಗಳು
ತಾವು ಕಲಿತ ಶಾಲೆಯನ್ನು ಬಹುತೇಕರು ಮರೆತುಹೋಗುವುದು ಸಹಜ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ರವಿ ಗುಂಜೀಕರರು ವಿದ್ಯೆ ಕಲಿತ ಶಾಲೆಯನ್ನೇ ದತ್ತು ತೆಗೆದುಕೊಂಡು ಅದರ ಏಳಿಗೆಗೆ ಮುಂದಾಗಿದ್ದಾರೆ. ತಾವು ಕಲಿಯುವಾಗ ಅನೇಕ ಕೊರತೆಗಳನ್ನು ಎದುರಿಸಿದ್ದ ರವಿ ಅವರು ಈಗ ಈ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಯಾವುದೇ ಕೊರತೆ ಉಂಟಾಗದಂತೆ ಶಾಲೆಯ ಸರ್ವಾಂಗೀಣ ಪ್ರಗತಿಯ ಕನಸು ಹೊತ್ತಿದ್ದಾರೆ.
– ಎಸ್.ಆರ್. ಹಿರೇಮಠ,
ರವಿ ಗುಂಜೀಕರ ಅಭಿಮಾನಿ ಬಳಗದ ಉಪಾಧ್ಯಕ್ಷ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರವಿ ಗುಂಜೀಕರ ಮಾತನಾಡಿ, ಇದೇ ಶಾಲೆಯಲ್ಲಿ ನನ್ನ ಸಹಪಾಠಿಯಾಗಿದ್ದ ಅರುಣಕುಮಾರ ಚವ್ಹಾಣ ಈಗ ಉತ್ತಮ ಉದ್ದಿಮೆದಾರನಾಗಿ ಬೆಳೆದಿದ್ದು ನಾವಿಬ್ಬರೂ ಕೂಡಿ ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಅಭಿವೃದ್ಧಿಗೊಳಿಸುವ ಯೋಜನೆ ಹಾಕಿಕೊಂಡಿದ್ದೇವೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸರ್ಕಾರದ ಜೊತೆಗೆ ಸಮುದಾಯದ ಪಾತ್ರ ಮುಖ್ಯವಾಗಿದ್ದು, ಇಂಥ ಸಾಮಾಜಿಕ ಕಾರ್ಯಗಳ ಮೂಲಕ ನನ್ನ ನಿವೃತ್ತಿ ಸಾರ್ಥಕವಾಗಿದೆ ಎಂದರು.