ಶಿವಮೊಗ್ಗ:- ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಕ್ಷುಲ್ಲಕ ವಿಚಾರಕ್ಕೆ ಕೊಲೆ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ. ಅದರಂತೆ ಇಲ್ಲಿನ ಭದ್ರಾವತಿಯ ಹೊಸಮನೆ ಬಡಾವಣೆಯಲ್ಲಿ ಕ್ರಿಕೆಟ್ ಆಟದ ವೇಳೆ ಸ್ನೇಹಿತರ ನಡುವೆ ಆರಂಭವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ ಕಂಡಿದೆ.
23 ವರ್ಷದ ಅರುಣ್ ಮೃತ ದುರ್ದೈವಿ. ಘಟನೆಯಲ್ಲಿ ಸಂಜಯ್ ಎಂಬುವರಿಗೆ ಗಂಭೀರ ಗಾಯವಾಗಿದೆ. ಅರುಣ್, ಸಚಿನ್, ಸಂಜು, ಪ್ರಜ್ವಲ್ ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ. ಆರೋಪಿಗಳು, ಕೊಲೆಯಾದ ಅರುಣ್ ಮತ್ತು ಸಂಜಯ್ ಸ್ನೇಹಿತರಾಗಿದ್ದಾರೆ. ಇವೆರೆಲ್ಲರೂ ಒಟ್ಟಾಗಿ ಸೋಮವಾರ ಭದ್ರಾವತಿಯ ಹೊಸಮನೆ ಬಡಾವಣೆಯ ಶಾಲಾ ಮೈದಾನವೊಂದರಲ್ಲಿ ಕ್ರಿಕೆಟ್ ಆಡಿದ್ದಾರೆ. ಕ್ರಿಕೆಟ್ ಆಡುತ್ತಿದ್ದ ವೇಳೆ ಯಾವುದೋ ಕಾರಣಕ್ಕೆ ಗಲಾಟೆಯಾಗಿದೆ.
ನಂತರ, ಕೊಲೆಯಾದ ಅರುಣ್ ಸಂಜೆ ಕ್ರಿಕೆಟ್ ಆಟವಾಡಿ ಮನೆಗೆ ತೆರಳಿದ್ದಾರೆ. ನಂತರ, ಅರುಣ್, ಸಚಿನ್, ಸಂಜು, ಪ್ರಜ್ವಲ್ ಮದ್ಯ ಸೇವಿಸುತ್ತಾ ಕುಳಿತಿದ್ದಾಗ, ಕೊಲೆಯಾದ ಅರುಣ್ನನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಅರುಣ್ ಜೊತೆಗೆ ಸಂಜಯ್ ಕೂಡ ಬಂದಿದ್ದಾರೆ. ಈ ವೇಳೆ ಆರೋಪಿಗಳು ಜಗಳ ತೆಗೆದು, ಚಾಕುವಿನಿಂದ ಅರುಣ್ನ ಎದೆ ಭಾಗಕ್ಕೆ ಚುಚ್ಚಿ ಕೊಲೆ ಮಾಡಿದ್ದಾರೆ. ಅರುಣ್ ಜೊತೆ ಜಗಳಕ್ಕೆ ನಿಂತ ಸಂಜಯ್ ಕೈ ಹಾಗೂ ಬೆನ್ನಿನ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇನ್ನು, ಕೊಲೆ ಮಾಡಿದ ಬಳಿಕ ಆರೋಪಿಗಳಾದ ಅರುಣ್, ಸಚಿನ್, ಸಂಜು, ಪ್ರಜ್ವಲ್ ಸೇರಿದಂತೆ ಇನ್ನೂ ನಾಲ್ಕೈದು ಜನ ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಇವರಲ್ಲಿ ಐವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಮೃತ ಅರುಣ್, ಸಚಿನ್ ಎಂಬಾತನ ಕಪಾಳಕ್ಕೆ ಹೊಡೆದ ಹಿನ್ನೆಲೆಯಲ್ಲಿ ಗಲಾಟೆ ನಡೆದಿತ್ತು ಎಂದು ಬಾಯಿ ಬಿಟ್ಟಿದ್ದಾರೆ.