ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಕುಡಿಯುವ ನೀರು ಪೂರೈಕೆಯಲ್ಲಿನ ತಾರತಮ್ಯವನ್ನು ವಿರೋಧಿಸಿ ಇಲ್ಲಿಯ 4ನೇ ವಾರ್ಡಿನ ಮಹಿಳೆಯರು ಶುಕ್ರವಾರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಖಾಲಿ ಕೊಡ ಹಿಡಿದು ಗ್ರಾಮ ಪಂಚಾಯಿತಿಗೆ ಆಗಮಿಸಿದ ಮಹಿಳೆಯರು ಗ್ರಾ.ಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಚನ್ನಮ್ಮ ಕಂಠಿ, ರೇಣುಕಾ ಬೇಲೇರಿ, ವಿಜಯಲಕ್ಷ್ಮೀ ಕುಲಕರ್ಣಿ, ಕಳೆದ 8 ತಿಂಗಳಿಂದ 4ನೇ ವಾರ್ಡಿನ ನಮ್ಮ ಭಾಗದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಗ್ರಾಮ ಪಂಚಾಯಿತಿಯು ತಾರತಮ್ಯ ಮಾಡುತ್ತಿದೆ. 8 ತಿಂಗಳಿAದ 150 ಮೀಟರ್ ದೂರವಿರುವ ಸಿಸ್ಟನ್ ಮೂಲಕ ನೀರು ತರಲಾಗುತ್ತಿದ್ದು, ಪಕ್ಕದ ವಾರ್ಡಿನಲ್ಲಿ ಪ್ರತಿ ದಿನ ನೀರು ಪೂರೈಕೆ ಮಾಡಿ ತಾರತಮ್ಯ ಮಾಡುತ್ತಿದ್ದಾರೆ. ಈ ಕುರಿತು ವಾಲ್ಮನ್ನ್ನು ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ವಾರ್ಡಿನ ಜನ ಪ್ರತಿನಿಧಿಗಳಿಗೆ ನೀರು ಪೂರೈಕೆ ಸರಿಪಡಿಸಲು ವಿನಂತಿಸಿಕೊಂಡರೆ ಕಾಳಜಿ ವಹಿಸುತ್ತಿಲ್ಲ. ಹಲವು ಬಾರಿ ಗ್ರಾ.ಪಂ ಅಧಿಕಾರಗಳಿಗೆ ನಮ್ಮ ಸಮಸ್ಯೆ ಹೇಳಿಕೊಂಡರೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾರದೊಳಗೆ ಸಮಸ್ಯೆಯನ್ನು ಸರಿಪಡಿಸದಿದ್ದರೆ ಗ್ರಾ.ಪಂ ಮುಂದೆ ಧರಣಿ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ರೇಣವ್ವ ಬಣವಿ, ಸರೋಜವ್ವ ಬಣವಿ, ಗಿರಿಜವ್ವ ಬೇಲೇರಿ, ಶಾಂತವ್ವ ಬಣವಿ, ಚಂಬಮ್ಮ ಬಣವಿ, ರೇಣವ್ವ ಬಣವಿ ಸೇರಿದಂತೆ ಮುಂತಾದವರು ಇದ್ದರು.
ಸ್ಥಳಕ್ಕೆ ಭೇಟಿ ನೀಡಿದ ಎಸ್.ಡಿ.ಎ ಎಂ.ಎ. ಗಾಜಿ, ಆ ಭಾಗದಲ್ಲಿ ನೀರು ಪೂರೈಕೆಯ ಪೈಪ್ಲೈನ್ ಒಳಗಡೆ ದುರಸ್ಥಿಗೆ ಬಂದಿದೆ. ಸರಿಪಡಿಸಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಶಾಶ್ವತ ಪರಿಹಾರಕ್ಕಾಗಿ ಈ ಭಾಗದಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು.