ವಿಜಯಸಾಕ್ಷಿ ಸುದ್ದಿ, ಮೈಸೂರು
ಹೆಣದ ಮೇಲೆ ಹಣ ಮಾಡುವ ಕೆಲಸ ಮಾಡಬೇಡಿ ಎಂದು ತಮ್ಮದೆ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಗುಡುಗಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಮುಂದುವರಿಸುವುದು ಸರಿಯಲ್ಲ. ಬಡವರಿಗೆ ಸರ್ಕಾರ ಸರಿಯಾದ ಪ್ಯಾಕೇಜ್ ಘೋಷಣೆ ಮಾಡಿಲ್ಲ. ರಾಜ್ಯದಲ್ಲಿ ಸದ್ಯ ಕೊರೊನಾದಿಂದ ಜನ ಸಾಯುತ್ತಿದ್ದಾರೆ. ಇದೇ ರೀತಿ ಸರ್ಕಾರದ ದುರ್ವರ್ತನೆ ಮುಂದುವರೆದರೆ ಜನ ಮುಂದೆಯೂ ಸಾಯುತ್ತಾರೆ ಎಂದು ಗುಡುಗಿದ್ದಾರೆ.
ನಾಯಕತ್ವದ ಬದಲಾವಣೆ ಹೈಕಮಾಂಡ್ ಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿನ ಗೊಂದಲ ಮುಂದುವರೆಸಲು ಲಾಕ್ ಡೌನ್ ಅನ್ನು ರಕ್ಷಣೆಯಾಗಿ ಪಡೆಯುವುದು ಬೇಡ. ಸದ್ಯ ರಾಜ್ಯದಲ್ಲಿ ಕೊರೊನಾದಿಂದಾಗಿ ಜನ ಕಂಗಾಲಾಗುತ್ತಿದ್ದಾರೆ. ಆರೋಗ್ಯ ಇಲಾಖೆಯನ್ನು 5 ಭಾಗ ಮಾಡಿದ್ದಾರೆ. ಇಬ್ಬರನ್ನು ಹಾಸಿಗೆ ಮಂತ್ರಿ ಮಾಡಿದ್ದಾರೆ. ಒಬ್ಬರನ್ನು ಆಕ್ಸಿಜನ್ ಮಂತ್ರಿ ಮಾಡಿದ್ದಾರೆ. ಆದರೆ, ಇವರಿಂದಲೂ ಜನರಿಗೆ ಸರಿಯಾದ ಸೌಲಭ್ಯ ಸಿಗುತ್ತಿಲ್ಲ. ಹೆಣದ ಮೇಲೆ ಹಣ ಎತ್ತಬೇಡಿ ಎಂದು ಸರ್ಕಾರಕ್ಕೆ ಮತ್ತೆ ಚಾಟಿ ಬೀಸಿದ್ದಾರೆ.
ತಜ್ಞರ ಮಾತನ್ನು ಸರ್ಕಾರ ಎಂದಿಗೂ ಕೇಳಿಲ್ಲ. ಸಚಿವ ಸಂಪುಟದಲ್ಲಿ ತಮಗೆ ಇಷ್ಟಬಂದಂತೆ ನಿರ್ಧಾರ ಕೈಗೊಂಡಿದ್ದಾರೆ. ಈಗ ತಜ್ಞರ ಸಲಹೆ ಎಂದು ಹೇಳಿ ಲಾಕ್ ಡೌನ್ ಮುಂದುವರಿಸಬೇಡಿ. ಮತ್ತೊಮ್ಮೆ ಲಾಕ್ ಡೌನ್ ಮಾಡುವುದಾದರೆ ಪ್ರತಿಯೊಬ್ಬರಿಗೂ ರೂ. 10 ಸಾವಿರ ಕೊಟ್ಟು ನಂತರ ಮಾಡಿ. ನಿಮ್ಮ ತೆವಲಿಗಾಗಿ ಅಧಿಕಾರ ಉಳಿಸಿಕೊಳ್ಳಲು ಜನರನ್ನು ಬಲಿ ಕೊಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರದ ಬಗ್ಗೆಯೂ ವಿಶ್ವನಾಥ್ ಅವರು ಸರ್ಕಾರದ ವಿರುದ್ಧ ಗುಡುಗಿದ್ದಾರೆ. ನಾಳೆ ಸಚಿವ ಸಂಪುಟ ಸಭೆ ಇದೆ. ಭೂಮಿ ಪರಭಾರೆ ತೀರ್ಮಾನ ಧೃಡಿಕರಣಕ್ಕೆ ಬರುತ್ತದೆ. ಅದನ್ನು ಧೃಡಿಕರಣ ಮಾಡಬಾರದು. ಯಡಿಯೂರಪ್ಪ ಇದೇ ವಿಚಾರದಲ್ಲಿ ಅಹೋರಾತ್ರಿ ಹೋರಾಟ ಮಾಡಿದ್ದರು. ಈಗ ಅವರೆ ಭೂಮಿ ಕೊಡಲು ಹೊರಟ್ಟಿದ್ದಾರೆ. ಇಂತಹ ಸರ್ಕಾರ ತಂದಿದ್ದಕ್ಕೆ ವ್ಯಥೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.