ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಉತ್ಖನನ ಕಾಮಗಾರಿಗೆ ಚಾಲನೆ ನೀಡಲು ಜೂನ್ 3ರಂದು ಲಕ್ಕುಂಡಿಗೆ ಆಗಮಿಸಲಿದ್ದು, ಗ್ರಾಮದ ಸರ್ವರೂ ಪಕ್ಷಾತೀತವಾಗಿ ಅವರನ್ನು ಬರಮಾಡಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶಾಸಕ ಸಿ.ಸಿ. ಪಾಟೀಲ ವಿನಂತಿಸಿಕೊಂಡರು.
ಇಲ್ಲಿಯ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಾಗಾರಿಗಳಿಗೆ ಭೂಮಿಪೂಜೆ ಹಾಗೂ ಸಿ.ಎಂ. ಸಿದ್ದರಾಮಯ್ಯ ಅವರು ಆಗಮನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೂನ್ 3ರಂದು ಲಕ್ಕುಂಡಿ ಗ್ರಾಮಕ್ಕೆ ಸಿ.ಎಂ ಸಿದ್ಧರಾಮಯ್ಯನವರು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ನಡೆಯಲಿರುವ ಉತ್ಖನನ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಪಕ್ಷಾತೀತವಾಗಿ ಸಿ.ಎಂ ಅವರನ್ನು ಸ್ವಾಗತಿಸಿ ಯಶಸ್ವಿಗೊಳಿಸಬೇಕು. ಪ್ರವಾಸೋದ್ಯಮ ಬೆಳೆಯಲು ಪ್ರವಾಸಿಗರಿಗೆ ಮೂಭೂತ ಸೌಲಭ್ಯ ಕುರಿತು, ಪ್ರಥಮದರ್ಜೆ ಕಾಲೇಜು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಗ್ರಾಮದ ವತಿಯಿಂದ ಸಲ್ಲಿಸಲು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಸರಕಾರದಿಂದ ಅನುಮತಿ ಪಡೆದು ಉತ್ಖನನ ಕಾಮಗಾರಿ ಮಾಡುತ್ತಿರುವುದರಿಂದ ಲಕ್ಕುಂಡಿ ವೈಭವ ಮರುಕಳಿಸಲಿದೆ. ಗ್ರಾಮದಲ್ಲಿ 72.80 ಲಕ್ಷ ರೂ ವೆಚ್ಚದಲ್ಲಿ ಶಾಲೆ, ಗ್ರಂಥಾಲಯ, ಅಂಗನವಾಡಿ ಕಟ್ಟಡಗಳನ್ನು ಲೋಕಾರ್ಪಣಿಗೊಳಿಸಲಾಗಿದೆ. 79.96 ಲಕ್ಷ ರೂಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಲಾಗಿದ್ದು, ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಜಿ.ಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಮಾತನಾಡಿ, ಇತ್ತೀಚೆಗೆ ಗ್ರಾಮದಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆಯ ಸಂದರ್ಭದಲ್ಲಿ 1500ಕ್ಕೂ ಹೆಚ್ಚು ಅವಶೇಷಗಳು ದೊರೆತಿದ್ದವು. ಅವುಗಳ ಬಯಲು ವಸ್ತುಸಂಗ್ರಾಲಯ ಮಾಡಲು ಬಜೆಟ್ನಲ್ಲಿ ಘೋಷಿಸಿರುವಂತೆ ಸಿ.ಎಂ ಅವರು ಭೂಮಿಪೂಜೆ ನೆರವೇರಸಲಿದ್ದು, ಶಾಸಕ ಸಿ.ಸಿ. ಪಾಟೀಲರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡರು.
ಲಕ್ಕುಂಡಿ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಮಾತನಾಡಿ, 11 ಮತ್ತು 12ನೇ ಶತಮಾನದಿಂದ ಕಲ್ಯಾಣ ಚಾಲುಕ್ಯರು, ಹೊಯ್ಸಳರು ಸೇರಿದಂತೆ ಹಲವಾರು ರಾಜರು ಆಳಿ ಈ ನೆಲವನ್ನು ಸ್ವರ್ಗವನ್ನಾಗಿ ಮಾಡಿದ್ದರು. ಆ ಗತ ವೈಭವ ಮತ್ತೆ ಮರುಕಳಿಸಲು ಮತ್ತು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಲು ಉತ್ಖನನ ಕಾರ್ಯದೊಂದಿಗೆ ಗ್ರಾಮಸ್ಥರ ಸಹಕಾರ ಪ್ರಮುಖವಾಗಿದೆಪ್ರಿದರಿಂದ ಅಮೂಲ್ಯ ಅವಶೇಷಗಳ ದೊರೆತು ಇಡೀ ಜಗತ್ತೇ ಲಕ್ಕುಂಡಿಯನ್ನು ನೋಡುವಂತಾಗಬೇಕಿದೆ ಎಂದರು.
ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಗ್ರಾಮದ ದೇಗುಲದ ಪಕ್ಕ ಮತ್ತು ರಸ್ತೆಯ ಪಕ್ಕದಲ್ಲಿ ಇರುವ ತಿಪ್ಪೆಗಳನ್ನು, ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಮುಖ್ಯಮಂತ್ರಿಗಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.
ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಜಿ.ಪಂ ಮಾಜಿ ಸದಸ್ಯ ಎಸ್.ಬಿ. ಕಲಕೇರಿ, ತಾ.ಪಂ ಮಾಜಿ ಸದಸ್ಯ ಮಹೇಶ ಮುಸ್ಕಿನಭಾವಿ, ವಸಂತ ಮೇಟಿ, ಈಶ್ವರಪ್ಪ ಕುಂಬಾರ, ಗ್ರಾ.ಪಂ ಸರ್ವ ಸದಸ್ಯರು ವೇದಿಕೆಯಲ್ಲಿದ್ದರು. ಪಿ.ಡಿ.ಒ ಅಮೀರನಾಯಕ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಕೆ.ಬಿ. ಕೊಣ್ಣೂರು ನಿರೂಪಿಸಿದರು.
“ಉತ್ಖನನದ ನೆಪದಲ್ಲಿ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರವು ಜನವಸತಿ ಕುಟುಂಬಗಳಿಗೆ ತೊಂದರೆ ಕೊಡಬಾರದು. ಜನರನ್ನು ಒಕ್ಕಲೆಬ್ಬಿಸುವಂತಹ ಕಾರ್ಯ ನಡೆಸಬಾರದು
– ಸಿ.ಸಿ. ಪಾಟೀಲ.
ಶಾಸಕರು.
ಸರಕಾರದ ವಿವಿಧ ಸೌಲಭ್ಯವನ್ನು ಪಡೆಯಲು ಗ್ರಾಮಸ್ಥರು ಗದಗ ಶಹರಕ್ಕೆ ಅಲೆದಾಡುತ್ತಿದ್ದು, ಗ್ರಾಮಕ್ಕೆ ನಾಡ ಕಾರ್ಯಾಲಯನ್ನು ಸ್ಥಾಪಿಸಬೇಕೆಂದು ಮರಿಯಪ್ಪ ವಡ್ಡರ ಆಗ್ರಹಿಸಿದರು. ಶೈಕ್ಷಣಿಕ ಅಭಿವೃದ್ಧಿಗೆ ಪ್ರಥಮದರ್ಜೆ ಕಾಲೇಜು, ಪಿ.ಯು ವಿಜ್ಞಾನ ಕಾಲೇಜು ಸ್ಥಾಪಿಸಬೇಕು. ಉತ್ಖನನ ಮಾಡುವ ಬಗ್ಗೆ ಗ್ರಾಮಸ್ಥರಲ್ಲಿ ಭಯದ ವಾತವಾರಣವಿದ್ದು, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರವು ಸೂಕ್ತ ಮಾಹಿತಿ ನೀಡಬೇಕು ಎಂದು ನಿವೃತ್ತ ಸೈನಿಕ ದತ್ತಾತ್ರೇಯ ಜೋಶಿ ಸಲಹೆ ನೀಡಿದರು. ಗ್ರಾಮದ ಸ್ವಚ್ಛತೆಗೆ ಗ್ರಾ.ಪಂ ಮುಂದಾಗಬೇಕು ಎಂದು ಅಜ್ಜಣ್ಣ ಪಾಟೀಲ ಒತ್ತಾಯಿಸಿದರು.