ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮನುಷ್ಯ ಸೇರಿ ಜೀವ ಸಂಕುಲದ ರಕ್ಷಣಾ ಕವಚವಾಗಿ ಕಾರ್ಯ ನಿರ್ವಹಿಸುವ ಪರಿಸರದ ರಕ್ಷಣೆಯನ್ನು ನಿರ್ಲಕ್ಷಿಸಿದರೆ ಜೀವಕುಲ ಸಂಕಷ್ಟದ ಸುಳಿಗೆ ಸಿಲುಕುತ್ತದೆ ಎಂದು ಪಟ್ಟಣದ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವೇಶ ಮಹಾಂತಶೆಟ್ಟರ ಹೇಳಿದರು.
ಅವರು ಗುರುವವಾರ ಪಟ್ಟಣದ ಸೋಮೇಶ್ವರ ದೇವಾಲಯದ ಆವರಣದಲ್ಲಿ ಸೋಮೇಶ್ವರ ದೇವಸ್ಥಾನ ಭಕ್ತರ ಕಮಿಟಿ, ಜೆಸಿಐ, ಭಾರತೀಯ ಕಿಸಾನ್ ಸಂಘ, ಇನ್ನರ್ ವ್ಹೀಲ್ ಕ್ಲಬ್ನ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ವೇಳೆ ಮಾತನಾಡಿದ ಸೋಮೇಶ್ವರ ದೇವಸ್ಥಾನ ಭಕ್ತರ ಕಮೀಟಿ ಅಧ್ಯಕ್ಷ ಗುರಣ್ಣ ಪಾಟೀಲಕುಲಕರ್ಣಿ, ಮನುಷ್ಯನ ಜೀವಸೆಲೆಯಾದ ಪರಿಸರ ರಕ್ಷಣೆ ಮತ್ತು ಪೋಷಣೆ ಮಾಡುವುದು ಅಗತ್ಯವಾಗಿದೆ. ತಂತ್ರಜ್ಞಾನ, ನಗರೀಕರಣದಿಂದ ಮರ ಕಡಿದು ನಾಡು ಕಟ್ಟುವುದರಿಂದ ಮನುಷ್ಯ ತನ್ನ ಅವನತಿಗೆ ತಾನೇ ಕಾರಣವಾಗುತ್ತಿದ್ದಾನೆ. ಪರಿಸರ ಇದ್ದರೆ ನಲಿವು, ಇಲ್ಲದಿರೇ ಬರೀ ನೋವು. ಅದಕ್ಕಾಗಿ ಪರಿಸರ ರಕ್ಷಣೆಗೆ ನಾವೆಲ್ಲರೂ ಕೈಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಇನ್ನರ್ ವ್ಹೀಲ್ ಕ್ಲಬ್ನ ಮಾಲಾದೇವಿ ದಂದರಗಿ, ಜೆಸಿಐನ ಲಕ್ಷ್ಮೀ ಹಂಗನಕಟ್ಟಿ ಮಾತನಾಡಿದರು. ಸುಲೋಚನಾ ಜವಾಯಿ, ಬಸವರಾಜ ಅರಳಿ, ರೈತ ಸಂಘದ ಟಾಕಪ್ಪ ಸಾತಪುತೆ, ಆಯ್.ಬಿ. ಜಕ್ಕನಗೌಡ್ರ, ರಾಘವೇಂದ್ರ ಪೂಜಾರ, ಮಂಜುಳಾ ಸತ್ಯಪ್ಪನವರ, ಡಾ. ಹೂವಿನ ಮುಂತಾದವರಿದ್ದರು.