ನಿಸರ್ಗದ ಸೊಬಗನ್ನು ಇಮ್ಮಡಿಗೊಳಿಸುವ ಯೋಜನೆ

0
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಮುಂಡರಗಿ ತಾಲೂಕಿನ ಮತ್ತು ಡಂಬಳ ಹೋಬಳಿಯ ಭಾಗದಲ್ಲಿ ಹಸಿರು ಪರಿಸರ ವೃದ್ಧಿಸುವ ಉದ್ದೇಶದಿಂದ ಕೊರ್ಲಹಳ್ಳಿಯ ಸಸ್ಯ ಕ್ಷೇತ್ರದ ಮುಂಡರಗಿಯ ಸಾಮಾಜಿಕ ಅರಣ್ಯ ವಲಯದಲ್ಲಿ ಸಾವಿರಾರು ಸಸಿಗಳನ್ನು ಬೆಳೆಸಲಾಗಿದ್ದು, ಸಸಿ ನೆಡುವ ಆಸಕ್ತರು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ವಿಶೇಷವಾಗಿ ಕೃಷಿಕರಿಗೆ ರಿಯಾಯಿತಿ ದರದಲ್ಲಿ ಗಿಡಗಳನ್ನು ಹಂಚಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

Advertisement

ಪ್ರಸಕ್ತ ವರ್ಷದಲ್ಲಿ ಮುಂಗಾರು ಆಶಾದಾಯಕವಾಗಿದ್ದು, ಮೇ ತಿಂಗಳಿನಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿ ಬೆಟ್ಟ ಗುಡ್ಡಗಳು, ಗ್ರಾಮೀಣ ಪ್ರದೇಶಗಳು ಹಸಿರು ಹೊದ್ದುಕೊಂಡಿವೆ. ರಸ್ತೆ, ಕಾಲೇಜು ಮೈದಾನ, ಸರ್ಕಾರಿ ಕಚೇರಿ ಸುತ್ತಮುತ್ತ ಗಿಡ ನೆಡಲು ಭೂಮಿ ಹದವಾಗಿದ್ದು, ವಾತಾವರಣವೂ ಗಿಡಗಳ ಬೆಳವಣಿಗೆಗೆ ಪೂರಕವಾಗಿದೆ.

ಸಾಮಾಜಿಕ ಅರಣ್ಯ ಇಲಾಖೆಯ ಮೂಲಕ ಶಾಲಾ-ಕಾಲೇಜುಗಳಿಗೆ ಸಾವಿರಾರು ಸಸಿಗಳನ್ನು ಉಚಿತವಾಗಿ ನೀಡಲು ಸಿದ್ಧತೆ ಮಾಡಲಾಗಿದೆ. ಪಕ್ಷಿಗಳಿಗೆ ಹಣ್ಣು ನೀಡುವ, ರಸ್ತೆಬದಿ ನೆರಳು ನೀಡುವ, ಬದುಗಳ ಸುತ್ತ ಅಂತರ್ಜಲ ಸೃಜಿಸುವ ವಿವಿಧ ತಳಿಯ ಸಸಿಗಳನ್ನು ಮುತುವರ್ಜಿ ವಹಿಸಿ ಬೆಳೆಸಿರುವ ಮುಂಡರಗಿ ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ಸುನಿತಾ ಬಿ.ಎಸ್ ಮತ್ತು ಅವರ ಸಿಬ್ಬಂದಿ ವರ್ಗದವರ ಶ್ರಮ ಇದರ ಹಿಂದಿದೆ.

ಈಗಾಗಲೇ ಸಸಿಗಳನ್ನು ಬೆಳೆಸಲು ಅನುವಾಗುವಂತೆ ಸಾರ್ವಜನಿಕರು ಮತ್ತು ಸಾಗುವಳಿದಾರರಿಗೆ ಜಾಗೃತಿ ಮೂಡಿಸಲಾಗಿದೆ. ಮಿಯಾವಾಕಿ ಅರಣ್ಯ ಮಾದರಿಯಲ್ಲಿ ಸಸಿಗಳನ್ನು ನೆಟ್ಟು ಅರಣ್ಯ ಕೃಷಿ ಆಸಕ್ತರಿಗೆ ಸಸಿ ವಿತರಿಸುವ ಗುರಿಯನ್ನು ಇಲಾಖೆ ಹೊಂದಿದೆ. ಹಲವು ವರ್ಷಗಳಿಂದ ಕಾಡು ಕೃಷಿ ಮಾಡಿದವರು ಜಮೀನುಗಳ ಸುತ್ತ ಗಿಡಗಳನ್ನು ನೆಟ್ಟು ಲಾಭ ಪಡೆದಿದ್ದಾರೆ. ರಸ್ತೆ ಬದಿಯಲ್ಲಿ ನೆಟ್ಟಿರುವ ಸಾವಿರಾರು ಸಸಿಗಳು ಹೂ ಅರಳಿಸಿ ನಿಸರ್ಗದ ಸೊಬಗನ್ನು ಇಮ್ಮಡಿಗೊಳಿಸಿದ ಶ್ರೇಯಸ್ಸು ಸಾಮಾಜಿಕ ಅರಣ್ಯ ಇಲಾಖೆಯದಾಗಿದೆ.

ಪರಿಸರ ಪ್ರಿಯರಿಗೆ ಹಾಗೂ ಸಂಘ-ಸಂಸ್ಥೆಗಳ ಸದಸ್ಯರಿಗೆ ವಿತರಿಸಲು ಈಗಾಗಲೆ 21760 ಸಸಿಗಳು ಸಿದ್ದಗೊಂಡಿದ್ದು, ರೈತರಿಗೆ ವಿತರಣೆಗಾಗಿ 10 ಸಾವಿರ ಸಸಿಗಳನ್ನು ಸಿದ್ಧಪಡಿಸಲಾಗಿದೆ. ಕೊರ್ಲಹಳ್ಳಿ ಸಸ್ಯ ಕ್ಷೇತ್ರದಲ್ಲಿ ಬಸವನಪಾದ, ಗುಲ್ಮೋಹರ, ಚಳ್ಳೆ, ಬೇವು ಅರಳಿ, ನೇರಳೆ, ಹೊಂಗೆ, ನೆಲ್ಲಿ ಸೇರಿ ಹೂ ಬಿಡುವ ಸಸಿಗಳನ್ನು ನೀಡಲಾಗುತ್ತಿದೆ. ಪರಿಸರ ದಿನದ ಅಂಗವಾಗಿ ಶಿಕ್ಷಕರು ಮತ್ತು ಮಕ್ಕಳಿಗೆ ನೂರಾರು ಸಸಿಗಳನ್ನು ವಿತರಿಸಲಾಗಿದೆ. ಹಿಡುವಳಿಯ ಸುತ್ತಮುತ್ತಲ ಬದುಗಳಲ್ಲಿ ನೆಟ್ಟು ಅಭಿವೃದ್ಧಿ ಪಡಿಸುವವರಿಗೂ ಗಿಡಗಳನ್ನು ಆದ್ಯತೆ ಮೇಲೆ ನೀಡಲಾಗುತ್ತಿದೆ. ಸರ್ಕಾರಿ ಕಚೇರಿಗಳ ಮುಂಭಾಗ ನೌಕರರು ಸಸಿ ಬೆಳೆಸಿ ಪರಿಸರ ಸಂರಕ್ಷಣೆಗೆ ಮುಂದಾದರೆ ಅರಣ್ಯ ಇಲಾಖೆ ಉಚಿತವಾಗಿ ಸಸಿಗಳನ್ನು ಒದಗಿಸುತ್ತದೆ.

ವ್ಯವಸಾಯಗಾರರಿಗೆ ಆರ್.ಕೆ.ವಿ.ವಾಯ್ (ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ) ಆರ್.ಎಸ್.ಪಿ.ಡಿ ಯೋಜನೆಯಡಿ 10 ಸಾವಿರ ಸಸಿಗಳನ್ನು ಬೆಳೆಸಲಾಗಿದೆ. ಸಿಲ್ವರ್ ಓಕ್, ಮಹಾಗನಿ, ತೇಗ, ಹೆಬ್ಬೇವು, ನುಗ್ಗೆ, ಬಿದಿರು, ನೇರಳೆ, ನೆಲ್ಲಿ, ಬೇವು, ಬಾದಾಮಿ, ಮೊದಲಾದ ಸಸಿಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಹಿರಿಯ ಅಧಿಕಾರಿಗಳ ಸಲಹೆ ಮೇರೆಗೆ ಈಗಾಗಲೇ ಮುಂಡರಗಿ ಮತ್ತು ಡಂಬಳ ಹೋಬಳಿಯ ಭಾಗದಲ್ಲಿ ರಸ್ತೆಯ ಪಕ್ಕದಲ್ಲಿ ಹಚ್ಚಿದ ಸಾವಿರಾರು ಗಿಡಗಳು ಉತ್ತಮವಾಗಿ ಬೆಳೆದಿದೆ. ನರ್ಸರಿಯಲ್ಲಿ ರೈತರಿಗೆ ಉಪಯೋಗವಾಗುವ ಸಾವಿರಾರು ಸಸಿಗಳಿದ್ದು, ಇದರ ಸದುಪಯೋಗಪಡಿಸಿಕೊಂಡು ತಮ್ಮ ಜಮೀನಿನ ಬದುಗಳಲ್ಲಿ ಹಚ್ಚುವುದರಿಂದ ಮಣ್ಣಿನ ಸವಕಳಿ ತಡೆಯುವುದಲ್ಲದೆ, ಉತ್ತಮ ಪರಿಸರ ನಿರ್ಮಾಣವಾಗಲು ಸಾಧ್ಯವಾಗಲಿದೆ

– ಸುನಿತಾ ಬಿ.ಎಸ್.

ಸಾಮಾಜಿಕ ವಲಯ ಅರಣ್ಯ ಅಧಿಕಾರಿ-ಮುಂಡರಗಿ.


Spread the love

LEAVE A REPLY

Please enter your comment!
Please enter your name here