ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ಸಾಹಿತ್ಯದಲ್ಲಿ ಗಜಲ್ ಕಾವ್ಯ ಪ್ರಕಾರವು ಹುಲುಸಾಗಿ ಬೆಳೆಯುತ್ತಿದೆ. ಗಜಲ್ಗಳು ಸಹೃದಯನಲ್ಲಿ ವಿಶಿಷ್ಠ ಕಾವ್ಯಾನುಭವವನ್ನು ಉಂಟುಮಾಡುತ್ತವೆ. ಷಟ್ಪದಿ, ಸಾಂಗತ್ಯ, ತ್ರಿಪದಿಗಳಿಗೆ ಇರುವಂತೆ ಗಜಲ್ ರಚನೆಗೂ ಅನೇಕ ನಿಯಮಗಳಿವೆ. ಗಜಲ್ನ ಸೂಕ್ಷ್ಮತೆಗಳನ್ನು ಅರಿತು ರಚನೆಯಲ್ಲಿ ತೊಡಗಬೇಕೆಂದು ವಿನಾಯಕ ಕಮತದ ತಿಳಿಸಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜರುಗಿದ ಸಂಶೋಧನಾ ಕೃತಿಗಳ ಪರಿಚಯಾತ್ಮಕ ‘ಮಹಾ ಮಾತು’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶಾಂತರಸ, ಮುಕ್ತಾಯಕ್ಕರು ಕನ್ನಡದಲ್ಲಿ ಗಜಲ್ ರಚಿಸಿ ಹೊಸ ಸಾಧ್ಯತೆಗಳನ್ನು ಪರಿಚಯಿಸಿದ್ದಾರೆ. ಆಧ್ಯಾತ್ಮ, ಪ್ರಕೃತಿ, ಪ್ರೀತಿ, ಪ್ರಚಲಿತ ವಿಷಯಗಳನ್ನು ಆಧರಿಸಿ ಗಜಲ್ಗಳ ರಚನೆ ಸಾಗಿದೆ. ಹೊಸ ತಲೆಮಾರಿನ ಕವಿಗಳು ಕೂಡಾ ಗಜಲ್ ರಚನೆಯಲ್ಲಿ ತೊಡಗಿರುವದು ಸಾಹಿತ್ಯದ ಬೆಳವಣಿಗೆ ದೃಷ್ಟಿಯಿಂದ ಗಮನಾರ್ಹವಾದುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಅನೇಕರು ಸಾಹಿತ್ಯಿಕ ಹಿನ್ನೆಲೆಯಲ್ಲಿ ಸಂಶೋಧನೆಯನ್ನು ಮಾಡಿ ಮಹಾಪ್ರಬಂಧವನ್ನು ರಚಿಸಿದ್ದಾರೆ. ಅವುಗಳ ಕುರಿತು ಸಹೃದಯರಿಗೆ ಪರಿಚಯಿಸುವ ಹಿನ್ನೆಲೆಯಲ್ಲಿ `ಮಹಾ ಮಾತು’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕನ್ನಡ ಗಜಲ್ಗಳಲ್ಲಿ ವ್ಯಕ್ತಿ ಮತ್ತು ಅಭಿವ್ಯಕ್ತಿ ಕುರಿತು ಅಧ್ಯಯನ ಮಾಡಿ ವಿಶಿಷ್ಠ ಪ್ರಬಂಧವನ್ನು ವಿನಾಯಕ ಕಮತದ ಅವರು ಮಂಡಿಸಿದ್ದಾರೆ. ಅಲ್ಲದೇ ಮಕ್ಕಳ ಸಾಹಿತ್ಯದ ಬೆಳವಣಿಗೆ ಹಿನ್ನೆಲೆಯಲ್ಲಿಯೂ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.
ಡಿ.ಎಸ್. ಬಾಪುರಿ ಸ್ವಾಗತಿಸಿದರು. ರಾಹುಲ ಗಿಡ್ನಂದಿ ನಿರೂಪಿಸಿದರು. ಸತೀಶ ಚನ್ನಪ್ಪಗೌಡರ, ಕಿಶೋರಬಾಬು ನಾಗರಕಟ್ಟಿ, ಶಿಲ್ಪಾ ಮ್ಯಾಗೇರಿ, ಅಮರೇಶ ರಾಂಪೂರ, ಬಸವರಾಜ ಗಣಪ್ಪನವರ, ಬಿ.ಎಸ್. ಹಿಂಡಿ, ಶಕುಂತಲಾ ಗಿಡ್ನಂದಿ, ರಕ್ಷಿತಾ ಗಿಡ್ನಂದಿ, ಜೆ.ಎ. ಪಾಟೀಲ, ಶೇಖರಪ್ಪ ಕಳಸಾಪೂರ, ಶಾಂತಲಾ ಹಂಚಿನಾಳ, ಕೆ.ಜಿ. ವ್ಯಾಪಾರಿ ಮೊದಲಾದವರು ಕಾರ್ಯಕ್ರಮ ಭಾಗವಹಿಸಿದ್ದರು.