ಅಹಮದಾಬಾದ್: ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು ಬರೋಬ್ಬರಿ 265 ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್ಗೆ ಹೊರಟಿದ್ದ ಬೋಯಿಂಗ್ ಡ್ರೀಮ್ಲೈನರ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ರಾಜಸ್ಥಾನದ ಬಲೋತಾರಾ ಜಿಲ್ಲೆಯ ಅರಬಾ ಗ್ರಾಮದ ನಿವಾಸಿ ಖುಷ್ಬೂ ರಾಜ್ಪುರೋಹಿತ್ ಅವರು ಪ್ರಾಣ ಕಳೆದುಕೊಂಡಿದ್ದಾರೆ.
ಜನವರಿಯಲ್ಲಿ ಖುಷ್ಬೂ ಹಾಗೂ ಮನ್ಫೂಲ್ ಸಿಂಗ್ ವೈವಾಹಿತ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ಅವರ ಪತಿ ಲಂಡನ್ನಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿದ್ದರು. ಹೀಗಾಗಿ ಖುಷ್ಬೂ ಲಂಡನ್ನಲ್ಲಿದ್ದ ಗಂಡನನ್ನು ನೋಡಲು ಹೊರಟಿದ್ದರು.
ಮಗಳನ್ನು ಏರ್ಪೋರ್ಟ್ಗೆ ಬಿಟ್ಟು, ಆಕೆಯನ್ನು ಕಳುಹಿಸಿಕೊಟ್ಟಿದ್ದ ತಂದೆ ಮದನ್ ಸಿಂಗ್ ಅವರು, ಆಶೀರ್ವಾದ ಮಗಳೇ Going to London ಎಂದು ವಾಟ್ಸಪ್ ಸ್ಟೇಟಸ್ ಹಾಕಿ ಕಳುಹಿಸಿಕೊಟ್ಟಿದ್ದರು. ಆದರೆ ದುರದೃಷ್ಟವಶಾತ್ ವಿಮಾನ ದುರಂತದಲ್ಲಿ ಮಗಳು ಸಾವನ್ನಪ್ಪಿದ್ದಾರೆ.
ಅಹಮದಾಬಾದ್ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟ ಏರ್ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ಪರಿಣಾಮ ಅಹಮದಾಬಾದ್ ಸಮೀಪದ ಮೇಘನಿ ನಗರದ ಬಿಜೆ ಎಂಬಿಬಿಎಸ್ ಕಾಲೇಜು ಹಾಸ್ಟೆಲ್ಗೆ ಡಿಕ್ಕಿ ಹೊಡೆದಿದೆ. ವಿಮಾನದಲ್ಲಿದ್ದ 242 ಪ್ರಯಾಣಿಕ ಪೈಕಿ 241 ಜನ ಸಾವನ್ನಪ್ಪಿದ್ದಾರೆ.