ಏಪ್ರಿಲ್ 22 ರಂದು ಹಲವು ಅಮಾಯಕರ ಜೀವಗಳನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ನಟ ಆಮಿರ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಭಯೋತ್ಪಾದನೆ ಮಾಡುವವರು ಮುಸ್ಲಿಮರಲ್ಲ ಎಂದು ಆಮಿರ್ ಖಾನ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಆಮಿರ್ ಖಾನ್ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಪ್ರತಿಕ್ರಿಯಿಸಿ, ‘ಅವರು ನಮ್ಮ ಜನರನ್ನು ಕೊಂದರು. ಇದು ಯಾವ ರೀತಿಯ ವಿಧಾನ? ಇದು ಮಾನವೀಯತೆಯ ಮೇಲಿನ ದಾಳಿ. ಅವರು ಇದಕ್ಕೆ ನಾಚಿಕೆಪಡಬೇಕು. ಯಾವುದೇ ಧರ್ಮವು ಮುಗ್ಧ ಜನರನ್ನು ಕೊಲ್ಲಬೇಕೆಂದು ಹೇಳುವುದಿಲ್ಲ. ನಾನು ಭಯೋತ್ಪಾದಕರನ್ನು ಮುಸ್ಲಿಮರೆಂದು ಪರಿಗಣಿಸುವುದಿಲ್ಲ. ಇಸ್ಲಾಂನಲ್ಲಿ, ನೀವು ಮಹಿಳೆಯರ ವಿರುದ್ಧ ಕೈ ಎತ್ತುವಂತಿಲ್ಲ, ನೀವು ಚಿಕ್ಕ ಮಕ್ಕಳನ್ನು ಕೊಲ್ಲುವಂತಿಲ್ಲ, ಯಾವುದೇ ಮುಗ್ಧ ವ್ಯಕ್ತಿಯ ಜೀವವನ್ನು ತೆಗೆದುಕೊಳ್ಳುವಂತಿಲ್ಲ ಎಂದು ಬರೆಯಲಾಗಿದೆ. ಹಾಗೆ ಮಾಡಿದರೆ ಅದು ಇಸ್ಲಾಂ ವಿರುದ್ಧವಾಗಿದೆ’ ಎಂದರು.
‘ನನ್ನ ಸೈನ್ಯದ ಬಗ್ಗೆ ನನಗೆ ಹೆಮ್ಮೆ ಇದೆ. ಕಾರ್ಗಿಲ್ ಯುದ್ಧ ನಡೆದು ನಾವು ಅದರಲ್ಲಿ ಗೆದ್ದಾಗ, ಕಾರ್ಗಿಲ್ನಲ್ಲಿ 8 ದಿನಗಳ ಕಾಲ ಉಳಿದು ಎಲ್ಲಾ ರೆಜಿಮೆಂಟ್ಗಳನ್ನು ಭೇಟಿಯಾದ ಏಕೈಕ ವ್ಯಕ್ತಿ ನಾನು. ಅವರನ್ನು ಪ್ರೋತ್ಸಾಹಿಸಲು ನಾನು ಅಲ್ಲಿಗೆ ಹೋಗಿದ್ದೆ’ ಎಂದು ಆಮಿರ್ ಖಾನ್ ಹೇಳಿದ್ದಾರೆ.
ಇದೇ ವೇಳೆ ತಮ್ಮ ಸಿನಿಮಾಗಳಲ್ಲಿ ಆಮೀರ್ ಖಾನ್ ಹಿಂದೂ ಧರ್ಮವನ್ನು ಅವಮಾನಿಸುತ್ತಾರೆ ಹಾಗೂ ಲವ್ ಜಿಹಾದ್ ಅನ್ನು ಉತ್ತೇಜಿಸುತ್ತಾರೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿರುವ ನಟ, ನಾನು ಪ್ರತಿಯೊಂದು ಧರ್ಮವನ್ನು ಗೌರವಿಸುತ್ತೇನೆ. ನನ್ನ ಚಲನಚಿತ್ರಗಳಲ್ಲಿ ನಾನು ಹಿಂದೂ ಧರ್ಮವನ್ನು ಅವಮಾನಿಸಿಲ್ಲ. ಧರ್ಮದ ಹೆಸರಿನಲ್ಲಿ ಲಾಭ ಪಡೆಯುತ್ತಿರುವ ಜನರ ಬಗ್ಗೆ ನಾನು ಪ್ರಶ್ನೆಗಳನ್ನು ಎತ್ತಿದ್ದೇನೆ’. ‘ನಾನು ಮುಸ್ಲಿಂ ಮತ್ತು ನಾನು ಮುಸ್ಲಿಂ ಆಗಿರುವುದಕ್ಕೆ ಹೆಮ್ಮೆಪಡುತ್ತೇನೆ. ನಾನು ಭಾರತೀಯ ಮತ್ತು ನಾನು ಭಾರತೀಯ ಎಂದು ಹೆಮ್ಮೆಪಡುತ್ತೇನೆ ಎಂದಿದ್ದಾರೆ.