ನವದೆಹಲಿ: ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಅಹಮದಾಬಾದ್ ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಮೇಘನಿನಗರ ಪ್ರದೇಶದ ವೈದ್ಯಕೀಯ ಕಾಲೇಜಿನ ಹತ್ತಿರದ ಕ್ಯಾಂಪಸ್ಗೆ ಅಪ್ಪಳಿಸಿತ್ತು.
ಭಾರೀ ಪ್ರಮಾಣದ ಬೆಂಕಿ ಹೊತ್ತಿಕೊಂಡು ವಿಮಾನದಲ್ಲಿದ್ದ 242 ಪ್ರಯಾಣಿಕರು ಮತ್ತು ಸಿಬ್ಬಂದಿಗಳಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದೆಲ್ಲರೂ ಸಾವನ್ನಪ್ಪಿದ್ದರು. ಅಷ್ಟೇ ಅಲ್ಲದೇ, ವಿಮಾನ ಅಪ್ಪಳಿಸಿದ ಮೆಡಿಕಲ್ ಹಾಸ್ಟೆಲ್ನ ಐವರು ಎಂಬಿಬಿಎಸ್ ವಿದ್ಯಾರ್ಥಿಗಳು ಸೇರಿ 29 ಜನರು ಸಾವನ್ನಪ್ಪಿದ್ದರು.
ಇನ್ನೂ ಏರ್ ಇಂಡಿಯಾ ವಿಮಾನದ ಪೈಲಟ್ ಆಗಿದ್ದ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ಅಂತ್ಯಕ್ರಿಯೆ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಜರುಗಿತು. ಮುಂಬೈನ ಪೊವಾಯಿಯ ಜಲ ವಾಯು ವಿಹಾರ್ನಲ್ಲಿರುವ ಮನೆಗೆ ಸುಮೀತ್ ಸಭರ್ವಾಲ್ ಅವರ ಮೃತದೇಹ ತಲುಪುತ್ತಿದ್ದಂತೇ, ತಂದೆ ಪುಷ್ಕರಾಜ್ ಸಭರ್ವಾಲ್ ಅವರ ದುಃಖದ ಕಟ್ಟೆ ಒಡೆಯಿತು. ಮಗನ ಪಾರ್ಥಿವ ಶರೀರದ ಮುಂದೆ ಕಣ್ಣೀರುಡುತ್ತಿದ್ದ ತಂದೆ, ಕೈಮುಗಿದು ಅಂತಿಮ ನಮನ ಸಲ್ಲಿಸಿದರು.
ಡಿಎನ್ಎ ಪರೀಕ್ಷೆಯ ಮೂಲಕ ಸುಮೀತ್ ಸಭರ್ವಾಲ್ ಅವರ ಗುರುತು ದೃಢಪಟ್ಟ ನಂತರ, ವಿಮಾನದ ಮೂಲಕ ಅವರ ಮೃತದೇಹವನ್ನು ಮುಂಬೈಗೆ ತರಲಾಯಿತು. ಅಲ್ಲಿಂದ ಶವವನ್ನು ಹೊತ್ತಿದ್ದ ಶವಪೆಟ್ಟಿಗೆಯನ್ನು ಪೊವಾಯಿಗೆ ಕೊಂಡೊಯ್ಯಲಾಯಿತು.
ಪುತ್ರನ ಮೃತದೇಹ ಇರಿಸಿದ ಶವ ಪೆಟ್ಟಿಗೆಯನ್ನು ಪದೇ ಪದೇ ಮುಟ್ಟಿ ಪ್ರೀತಿ ತೋರುತ್ತಿದ್ದ ತಂದೆ ಪುಷ್ಕರಾಜ್ ಸಭರ್ವಾಲ್, ಮಗ ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಸಿದ್ಧರಿರಲಿಲ್ಲ. ಈ ವೇಳೆ ಸಂಬಂಧಿಕರು ಪುಷ್ಕರಾಜ್ ಸಭರ್ವಾಲ್ ಅವರನ್ನು ಸಂತೈಸಿದ್ದಾರೆ.