ಬೆಂಗಳೂರು:- ರಾಜ್ಯರಾಜಧಾನಿ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ನಾಳೆ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕಾವೇರಿ 5ನೇ ಹಂತದ ಕಾಮಗಾರಿ ಹಾಗೂ ವಿದ್ಯುತ್ ನಿರ್ವಹಣೆ ಕಾರಣದಿಂದಾಗಿ ಕಾವೇರಿ ನೀರು ಸರಬರಾಜು ಸ್ಥಗಿತ ಅನಿವಾರ್ಯವಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದ್ದು, ಮುಂಜಾಗ್ರತೆಯಾಗಿ ಕಾವೇರಿ ನೀರು ಸಂಗ್ರಹಿಸಿಕೊಳ್ಳುವಂತೆ ನಾಗರಿಕರಿಗೆ BWSSB ಮನವಿ ಮಾಡಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ ಮುಂದಿನ ದಿನದ ಬೆಳಗ್ಗೆ 6 ಗಂಟೆಯವರೆಗೆ ನಗರದಲ್ಲಿ ಕಾವೇರಿ ನೀರು ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಬೆಂಗಳೂರು ಜಲಮಂಡಳಿ ಈ ಕುರಿತಂತೆ ಅಧಿಕೃತ ಪ್ರಕಟಣೆ ಹೊರಡಿಸಿದೆ.
ನಿರ್ವಹಣಾ ಕಾರ್ಯದ ವೇಳೆ, ಹಂತ-1ರಿಂದ ಹಂತ-5ರ ತನಕ ಇರುವ ಎಲ್ಲಾ ಜಲರೇಚಕ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗುವುದು. ಇದರಿಂದಾಗಿ ಕಾವೇರಿ ನೀರಿನ ಸರಬರಾಜು ಸಂಪೂರ್ಣವಾಗಿ ನಿರ್ಬಂಧಿತವಾಗಲಿದೆ. ನೀರಿನ ವ್ಯತ್ಯಯವನ್ನು ಮನದಲ್ಲಿಟ್ಟುಕೊಂಡು ನಗರದ ನಾಗರಿಕರು, ವಾಣಿಜ್ಯ ಸಂಸ್ಥೆಗಳು ಹಾಗೂ ಕೈಗಾರಿಕೆಗಳು ಮುಂಜಾಗ್ರತಾ ಕ್ರಮವಾಗಿ ಅಗತ್ಯವಿರುವ ನೀರನ್ನು ಪೂರ್ವದಲ್ಲಿ ಸಂಗ್ರಹಿಸಿಕೊಳ್ಳುವಂತೆ ಬೃಹತ್ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮನವಿ ಮಾಡಿದೆ.