ಹಾಸನ:– ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದ ಹಿನ್ನೆಲೆ ಹೇಮಾವತಿ ಜಲಾಶಯಕ್ಕೆ ಇಂದು ಭಾರೀ ಪ್ರಮಾಣದಲ್ಲಿ ಒಳಹರಿವು ಹೆಚ್ಚಿದೆ. ತಾಲೂಕಿನ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಒಂದೇ ದಿನದಲ್ಲಿ 11,270 ಕ್ಯೂಸೆಕ್ ಒಳಹರಿವು ಹೆಚ್ಚಳವಾಗಿದೆ. ಸದ್ಯ ಹೇಮಾವತಿ ಜಲಾಶಯಕ್ಕೆ 19,546 ಕ್ಯೂಸೆಕ್ ಒಳಹರಿವಿದೆ.
ಇಂದಿನ ನೀರಿನ ಮಟ್ಟ:
ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ – 37.103 ಟಿಎಂಸಿ
ಸದ್ಯ ಜಲಾಶಯದಲ್ಲಿರುವ ನೀರು – 27.714 ಟಿಎಂಸಿ
ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ – 2922.00 ಅಡಿ
ಇಂದಿನ ನೀರಿನ ಮಟ್ಟ – 2911.35 ಅಡಿ
ಒಳಹರಿವು – 19,546 ಕ್ಯೂಸೆಕ್
ಹೊರಹರಿವು – 1,040 ಕ್ಯೂಸೆಕ್
ಕೆಆರ್ ಪೇಟೆಯಲ್ಲಿ ನದಿ ಪಾತ್ರದ ಜನರಿಗೆ ಎಚ್ಚರಿಕೆ:
ಕೆ.ಆರ್. ಪೇಟೆ: ಹೇಮಾವತಿ ನದಿ ಪಾತ್ರದಲ್ಲಿ ವರುಣನ ಆರ್ಭಟ ಜೋರಾಗಿದೆ. ಹಾಸನದ ಗೊರೂರು ಅಣೆಕಟ್ಟೆ ಭರ್ತಿಯಾಗುವ ಹಂತದಲ್ಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೆ.ಆರ್. ಪೇಟೆ ತಾಲೂಕಿನ ಮಂದಗೆರೆ ಹಾಗೂ ಬಂಡಿಹೊಳೆ ಬಳಿಯ ಹೇಮಗಿರಿ ಅಣೆಕಟ್ಟೆಗಳಲ್ಲಿ ನದಿಯು ಉಕ್ಕಿ ಹರಿಯುತ್ತಿದೆ.
ಈ ಹಿನ್ನೆಲೆಯಲ್ಲಿ ಎಚ್ಚರಿಕೆ ಕ್ರಮ ತೆಗೆದುಕೊಂಡಿರುವ ತಾಲೂಕು ಆಡಳಿತವು ಪ್ರವಾಹದ ಎಚ್ಚರಿಕೆ ನೀಡಿದೆ. ಜನ ಜಾನುವಾರುಗಳನ್ನು ನದಿಗೆ ಇಳಿಸದಂತೆ ಮನವಿ ಮಾಡಿದೆ. ನದಿ ಪಾತ್ರ ಮತ್ತು ನದಿ ಪಕ್ಕದ ತಗ್ಗು ಪ್ರದೇಶದ ಜನ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಆದೇಶ ಹೊರಡಿಸಿದೆ.