ಬೆಂಗಳೂರು: ವಾರಾಂತ್ಯದಲ್ಲಿ ವಿಧಾನಸೌಧ ಆವರಣಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಿ ಎಂದು ಡಿಸಿಎಂ ಗೆ ಉದ್ಯಮಿ ಮೋಹನ್ದಾಸ್ ಪೈ ಆಗ್ರಹಿಸಿದ್ದಾರೆ. ಈ ಬಗ್ಗೆ X ಮಾಡಿರುವ ಮೋಹನ್ ದಾಸ್ ಪೈ, ನಾಗರಿಕರಿಗೆ ವಿಧಾನಸೌಧದ ಆವರಣಕ್ಕೆ ವಾರಾಂತ್ಯಗಳಲ್ಲಿ ಉಚಿತ ಪ್ರವೇಶ ಕಲ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಜಾದಿನಗಳಲ್ಲಿ ನಾಗರಿಕರು ವಿಧಾನಸೌಧ ಆವರಣದೊಳಗೆ ಬರಲು ಅವಕಾಶ ನೀಡಿ. ಇದರಿಂದ ಅವರು ‘ಜನರ ಅರಮನೆ’ಯ ಭವ್ಯತೆಯನ್ನು ಕಣ್ತುಂಬಿಕೊಳ್ಳಬಹುದು ಮತ್ತು ಆನಂದಿಸಬಹುದು.
ಇದು ನಮ್ಮ ಅರಮನೆ ಮತ್ತು ನಮ್ಮನ್ನು ಹೊರಗೆ ಇಡಲಾಗುತ್ತಿದೆ. ಮೊದಲು ನಮಗೆ ಒಳಗೆ ಹೋಗಲು, ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳಲು ಅವಕಾಶವಿತ್ತು. ಈಗ ನಮಗೆ ಅನುಮತಿ ಇಲ್ಲ. ದಯಮಾಡಿ ಸಾರ್ವಜನಿಕರಿಗೆ ಒಳ ಪ್ರವೇಶಿಸಲು, ಮಕ್ಕಳು ಒಳಗೆ ಆಟವಾಡಲು, ಆವರಣದಲ್ಲಿ ನಡೆಯಲು ಅವಕಾಶ ಕಲ್ಪಿಸಿ ಎಂದು ಮೋಹನ್ದಾಸ್ ಪೈ ಎಕ್ಸ್ ಸಂದೇಶದಲ್ಲಿ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಕಚೇರಿ ಮತ್ತು ಇತರರನ್ನು ಪೈ ಟ್ಯಾಗ್ ಮಾಡಿದ್ದಾರೆ. ಈ ಸಂದೇಶಕ್ಕೆ ಪ್ರತಿಕ್ರಿಯಿಸಿದ ಸಂದೀಪ್ ಹೆಗ್ಡೆ ಎಂಬವರು, ವಾರಾಂತ್ಗಳಲ್ಲಿ ಶುಲ್ಕ ಪಾವತಿ ಮಾಡಿ ಗೈಡ್ಗಳ ಜತೆ ವಿಧಾನಸೌಧಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಇದಕ್ಕೆ ಮರುಪ್ರಶ್ನೆ ಹಾಕಿದ ಪೈ, ‘ಅದಕ್ಕೆ ಶುಲ್ಕ ಯಾಕೆ? ನಾಗರಿಕರ ತೆರಿಗೆ ಹಣದಿಂದಲೇ ವಿಧಾನಸೌಧ ನಿರ್ಮಾಣ ಮಾಡಲಾಗಿದೆ’ ಎಂದಿದ್ದಾರೆ.