ನವದೆಹಲಿ:– ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ವಿರುದ್ಧ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ರಚಿಸಿದ್ದ ಸಂಸದರ ನಿಯೋಗದಿಂದ ವಿದೇಶಕ್ಕೆ ಹೋಗಿ ಬಂದ ನಂತರ ಕಾಂಗ್ರೆಸ್ ಸಂಸದ ಶಶಿ ತರೂರ್ ಬಿಜೆಪಿ ಜೊತೆ ಆಪ್ತವಾಗಿ ಗುರುತಿಸಿಕೊಂಡಿದ್ದಾರೆ. ಇದು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದೆ.
ಕೆಲವೇ ದಿನಗಳ ಹಿಂದಷ್ಟೇ ಪ್ರಧಾನಿ ಮೋದಿಯವರನ್ನು ಶಶಿ ತರೂರ್ ಭಾರತದ ದೊಡ್ಡ ಆಸ್ತಿ, ಅವರಿಗೆ ಸರಿಯಾದ ಬೆಂಬಲ ಬೇಕಿದೆ ಎಂದು ದಿನಪತ್ರಿಕೆಯೊಂದರಲ್ಲಿ ಬರೆದ ಅಂಕಣದಲ್ಲಿ ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಶಶಿ ತರೂರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಶಿ ತರೂರ್ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಪದೇ ಪದೇ ಹೊಗಳಿದ್ದಕ್ಕಾಗಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಟೀಕಿಸಿದ್ದು, “ನಮಗೆ ದೇಶ ಮೊದಲು. ಆದರೆ, ಕೆಲವರಿಗೆ ಮೋದಿಯೇ ಮೊದಲು” ಎಂದು ಲೇವಡಿ ಮಾಡಿದ್ದಾರೆ.
“ಶಶಿ ತರೂರ್ ಅವರ ಭಾಷೆ ತುಂಬಾ ಚೆನ್ನಾಗಿದೆ. ಅದಕ್ಕಾಗಿಯೇ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿಯೇ ಉಳಿಸಿಕೊಳ್ಳಲಾಗಿದೆ. ನಾವು ದೇಶಕ್ಕಾಗಿ ಒಟ್ಟಾಗಿ ನಿಂತಿದ್ದೇವೆ ಎಂದು ನಾನು ಗುಲ್ಬರ್ಗದಲ್ಲಿ ಹೇಳಿದ್ದೆ. ಆಪರೇಷನ್ ಸಿಂಧೂರ್ನಲ್ಲಿ ನಾವು ಒಟ್ಟಾಗಿ ನಿಂತಿದ್ದೇವೆ. ದೇಶ ಮೊದಲು ಎಂದು ನಾವು ಹೇಳಿದ್ದೇವೆ, ಆದರೆ ಕೆಲವರು ಮೋದಿಯೇ ಮೊದಲು ಎನ್ನುತ್ತಿದ್ದಾರೆ. ಅವರಿಗೆ ಮೋದಿಯಾದ ನಂತರ ದೇಶ ಬರುತ್ತದೆ. ಹಾಗಾದರೆ, ನಾವು ಏನು ಮಾಡಬೇಕು?” ಎಂದು ಪ್ರಶ್ನಿಸಿದ್ದಾರೆ. ನಾನು ಚುನಾವಣೆಗಳನ್ನು ಗೆಲ್ಲುತ್ತೇನೆ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ನಾನು ಮತ್ತೆ ಮತ್ತೆ ಗೆಲ್ಲುತ್ತೇನೆ ಎಂದು ಅವರು ಬಿಹಾರದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಚುನಾವಣಾ ಆಯೋಗ ಈಗ ನಿಮ್ಮ ಕೈಗೊಂಬೆಯಾಗಿದೆ ಮೋದಿಯವರೇ. ನೀವು ಚುನಾವಣೆಯಲ್ಲಿ ಗೆಲ್ಲುತ್ತಿಲ್ಲ. ನಿಮ್ಮ ಯಂತ್ರ ಗೆಲ್ಲುತ್ತಿದೆ” ಎಂದು ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.