ವಿಷ್ಣು ಮಂಚು ನಟನೆಯ ಬಹುನಿರೀಕ್ಷಿತ ‘ಕಣ್ಣಪ್ಪ’ ಸಿನಿಮಾ ರಿಲೀಸ್ ಗೆ ಇನ್ನೊಂದು ದಿನ ಮಾತ್ರವೇ ಭಾಕಿ ಇದೆ. ಅತ್ತ ಚಿತ್ರತಂಡ ಸಿನಿಮಾ ರಿಲೀಸ್ ಕೆಲಸದಲ್ಲಿ ಬ್ಯುಸಿಯಾಗಿದ್ರೆ ಇತ್ತ ಮಂಚು ವಿಷ್ಣು ಕಚೇರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ. ಮಂಚು ವಿಷ್ಣು ಅವರು ಸಿನಿಮಾ ನಿರ್ಮಾಣ ನಟನೆಯ ಜೊತೆಗೆ ಇನ್ನೂ ಹಲವು ಉದ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ಜಿಎಸ್ಟಿ ಅಧಿಕಾರಿಗಳು ಮಂಚು ವಿಷ್ಣು ಅವರ ಕೆಲವು ಕಚೇರಿಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.
ಮಂಚು ವಿಷ್ಣು ಅವರಿಗೆ ಸೇರಿರುವ ಹೈದರಾಬಾದ್ನ ಕಾವೇರಿ ಹಿಲ್ಸ್ ಮತ್ತು ಜೂಬ್ಲಿ ಹಿಲ್ಸ್ನ ಕಚೇರಿಗಳ ಮೇಲೆ ದಾಳಿ ನಡೆಸಿ ಕೆಲವು ಕಾಗದ ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ಮಂಚು ವಿಷ್ಣು ಅವರ ತೆರಿಗೆ ಮಾಹಿತಿ, ವಿವಿಧ ಉದ್ಯಮಗಳಿಂದ ಬರುತ್ತಿರುವ ಆದಾಯ, ವಿಷ್ಣು ಅವರ ವ್ಯಾಪಾರದ ಖರ್ಚುಗಳು ಇನ್ನಿತರೆ ಮಾಹಿತಿಗಳ ತನಿಖೆಯನ್ನು ಅಧಿಕಾರಿಗಳು ನಡೆಸಿದ್ದಾರೆ ಎನ್ನಲಾಗುತ್ತಿದೆ. ವಿಶೇಷವಾಗಿ ಮಂಚು ವಿಷ್ಣು ಅವರ ಸಿನಿಮಾ ಸಂಬಂಧಿತ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರಂತೆ.
ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಮಂಚು ವಿಷ್ಣು, ‘ನಾವು ಯಾವುದನ್ನೂ ಮುಚ್ಚಿಟ್ಟಿಲ್ಲ, ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ನಾವು ಅವರಿಗೆ ಸಹಕಾರ ನೀಡಿದ್ದೇವೆ’ ಎಂದಿದ್ದಾರೆ. ಇನ್ನು ಅಧಿಕಾರಿಗಳು, ಈ ರೀತಿಯ ತಪಾಸಣೆ ಸಾಮಾನ್ಯವಾದುದು, ತೆರಿಗೆ ಸೋರಿಕೆ ಆಗದೇ ಇರಲೆಂದು ಈ ರೀತಿಯ ತಪಾಸಣೆಗಳನ್ನು ಕಾಲ ಕಾಲಕ್ಕೆ ಮಾಡುತ್ತಿರುತ್ತೇವೆ ಎಂದಿದ್ದಾರೆ.