ಬೆಂಗಳೂರು: ಸೆಪ್ಟೆಂಬರ್ ಕ್ರಾಂತಿ ಬಗ್ಗೆ ರಾಜಣ್ಣಗೆ ಸುಳಿವು ಇರಬಹುದು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಸೆಪ್ಟಂಬರ್ ನಂತರ ಭಾರಿ ಬದಲಾವಣೆ ಆಗಲಿದೆ ಎಂಬ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ರಾಜಣ್ಣ ಅವರಿಗೆ ಯಾವ ಮಾಹಿತಿ ಇದೆ ಗೊತ್ತಿಲ್ಲ. ಸೆಪ್ಟೆಂಬರ್ನಲ್ಲಿ ಕ್ರಾಂತಿಯಾಗುತ್ತೆ ಅಂದಿದ್ದಾರೆ.
ಅವರಿಗೆ ಯಾವುದೋ ಮಾಹಿತಿ ಇರಬೇಕು. ಇಲ್ಲದಿದ್ದರೆ ಆ ರೀತಿ ಅವರು ಜವಾಬ್ದಾರಿ ಸ್ಥಾನದಲ್ಲಿ ಇದ್ದು ಹೇಳುತ್ತಿರಲಿಲ್ಲ. ಯಾವ ಕ್ರಾಂತಿ ಅನ್ನೋದನ್ನು ಅವರನ್ನೇ ಕೇಳಿ. ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.
ಇನ್ನೂ ಮಂತ್ರಿಗಳ ಬದಲಾವಣೆ ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರಿಗಿರುವ ಮಾಹಿತಿ ಪ್ರಕಾರ ಹೇಳಿರಬಹುದು. ನನಗೆ ಯಾವುದೇ ಮಾಹಿತಿ ಇಲ್ಲ. ನನಗೆ ತಿಳಿದಂತೆ ಯಾವುದೇ ಬದಲಾವಣೆ ಆಗಲ್ಲ. ಮುಂದೇನಾಗುತ್ತೆ ಅಂತ ಹೇಗೆ ಹೇಳಲು ಸಾಧ್ಯ?. ಮುಂದೇನು ಅಂತ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.