ಒರಟ ಶ್ರೀ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಶಬರಿ’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆದ ಬೆನ್ನಲ್ಲೇ, ಇದೀಗ ಚಿತ್ರದ ‘ತಂದಾನಿ ತನನೋ’ ವಿಡಿಯೊ ಸಾಂಗ್ ಬಿಡುಗಡೆಯಾಗಿದೆ. ಹಾಡು ಬಿಡುಗಡೆಯಾದ ನಂತರ ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ಚಿತ್ರದ ವಿಡಿಯೊ ಸಾಂಗ್ ಅನ್ನು ನಿರ್ದೇಶಕ ಓಂ ಪ್ರಕಾಶ್ ರಾವ್, ರಘು ರಾಮ್, ಬಾಲಾಜಿ ವೀರಾಸ್ವಾಮಿ ಹಾಗೂ ಉದ್ಯಮಿ ವಿ. ಬಾಬು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಓಂ ಪ್ರಕಾಶ್ ರಾವ್ ಮತ್ತು ಬಾಲಾಜಿ ವೀರಾಸ್ವಾಮಿ, ‘ತಂದಾನಿ ತನನೋ’ ಹಾಡು ಅತ್ಯಂತ ಮನಮೋಹಕವಾಗಿ ಮೂಡಿಬಂದಿದ್ದು, ಸಂಗೀತ ನಿರ್ದೇಶಕ ಬಿ.ಆರ್. ಹೇಮಂತ್ ಕುಮಾರ್ ಅವರ ಸಂಗೀತ ಮನಸೂರೆಗೊಳ್ಳುವಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ, ಸರೆಗಮಪ ಖ್ಯಾತಿಯ ಅಶ್ವಿನ್ ಶರ್ಮಾ ಅವರ ಗಾಯನ ಹಾಡಿನ ಮೆರುಗು ಹೆಚ್ಚಿಸಿದ್ದು, ನಟ ಸಮರ್ಥ್ ಮತ್ತು ಧನ್ವಿ ತಮ್ಮ ಪಾತ್ರಗಳಲ್ಲಿ ಹೊಸಬರೆನ್ನಿಸದಷ್ಟು ಸಹಜ ಅಭಿನಯ ನೀಡಿದ್ದಾರೆ ಎಂದು ಪ್ರಶಂಸಿಸಿದರು.
ಇದೇ ವೇಳೆ ಮಾತನಾಡಿದ ರಘು ರಾಮ್, ಹೊಸ ಪ್ರತಿಭೆಗಳ ಈ ಪ್ರಯತ್ನ ಶ್ಲಾಘನೀಯವಾಗಿದ್ದು, ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.
ಚಿತ್ರದ ನಿರ್ದೇಶಕ ಒರಟ ಶ್ರೀ ಅವರೇ ಈ ಹಾಡಿನ ಸಾಹಿತ್ಯವನ್ನು ರಚಿಸಿದ್ದಾರೆ. ಹಾಡು ಸೃಷ್ಟಿಯಾದ ಹಿನ್ನೆಲೆಯನ್ನು ವಿವರಿಸಿದ ಅವರು, ಚಿತ್ರದಲ್ಲಿ ಸಮರ್ಥ್ ಮತ್ತು ಧನ್ವಿ ಮಾತ್ರವಲ್ಲದೆ ಜೀಪ್ ಕೂಡ ಪ್ರಮುಖ ಪಾತ್ರದಂತೆಯೇ ಕಾಣಿಸಿಕೊಳ್ಳಲಿದೆ ಎಂದು ಹೇಳಿದರು. ಸಸ್ಪೆನ್ಸ್, ಥ್ರಿಲ್ಲರ್ ಸೇರಿದಂತೆ ಹಲವು ಆಸಕ್ತಿಕರ ಅಂಶಗಳನ್ನು ಒಳಗೊಂಡಿರುವ ಕಥೆಯೊಂದಿಗೆ ‘ಶಬರಿ’ ಪ್ರೇಕ್ಷಕರ ಮುಂದೆ ಬರಲಿದೆ ಎಂದು ಮಾಹಿತಿ ನೀಡಿದರು.
ಬರವಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಸಿವಿಲ್ ಇಂಜಿನಿಯರ್ ರಮೇಶ್, ಸುಧಾಕರ್ ರೆಡ್ಡಿ ಯಾಕಸಿರಿ ಹಾಗೂ ವಿಷ್ಣುಕಾಂತ್ ಎ. ನಿರ್ಮಿಸಿದ್ದಾರೆ. ಚಿತ್ರದಲ್ಲಿ ಸಮರ್ಥ್ ಮತ್ತು ಕೃತಿಕಾ ಗೌಡ ನಾಯಕ-ನಾಯಕಿಯಾಗಿ ನಟಿಸಿದ್ದು, ಧನ್ವಿ, ಎಂ.ಕೆ. ಮಠ, ನೀನಾಸಂ ಅಶ್ವತ್, ಸೀತಾ ಹರ್ಷವರ್ಧನ್, ಯೋಗೇಶ್ ವೀರ್, ಮಂಡ್ಯ ಸಿದ್ದು ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
ಚಿತ್ರಕ್ಕೆ ಬಿ.ಆರ್. ಹೇಮಂತ್ ಕುಮಾರ್ ಸಂಗೀತ ಸಂಯೋಜನೆ, ಸಾಮ್ರಾಟ್ ನಾಗರಾಜ್ ಛಾಯಾಗ್ರಹಣ, ಕೆ. ಗಿರೀಶ್ ಕುಮಾರ್ ಸಂಕಲನ ಹಾಗೂ ಕೋರ ಚಿನ್ನಯ್ಯ ಸಾಹಸ ನಿರ್ದೇಶನವಿದೆ.



