ವಿಜಯಸಾಕ್ಷಿ ಸುದ್ದಿ, ಗದಗ: ದಿ ನೆಟ್ವರ್ಕ್ ಅಸೋಸಿಯೇಟೆಡ್ ಫಾರ್ ಸ್ಟ್ರೀಟ್ ವೆಂಡರ್ಸ್ ಆಫ್ ಕರ್ನಾಟಕ, ಮ್ಯಾಕ್ಸಿಕ್ಯಾಬ್ ಚಾಲಕರ-ಮಾಲಕರ ಸಂಘ ಹಾಗೂ ವೆಲ್ಕಮ್ ಹೊಟೇಲ್ ಅಟೋಸ್ಟ್ಯಾಂಡ್ ಸಂಘದ ವತಿಯಿಂದ ಗದಗ ಶಹರದ ಶ್ರೀ ಗಾನಯೋಗಿ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸುವಂತೆ ಜಿಲ್ಲಾಧಿಕಾರಿಗಳು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವಿದ್ಯಾರ್ಥಿಗಳಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ, ಅಟೋ ಚಾಲಕರಿಗೆ, ಹಳ್ಳಿಯಿಂದ ಶಹರಕ್ಕೆ ಬಂದು ವ್ಯಾಪಾರ ಮಾಡುವವರಿಗೆ, ರೋಗಿಗಳಿಗೆ ಗದಗ ಶಹರ ಶ್ರೀ ಗಾನಯೋಗಿ ಪುಟ್ಟರಾಜ ಗವಾಯಿಗಳ (ಹಳೇ) ಬಸ್ ನಿಲ್ದಾಣವು ಪ್ರಮುಖ ಸ್ಥಳವಾಗಿದ್ದು, ನಿಗದಿತ ಸಮಯಕ್ಕೆ ಅತಿ ಕಡಿಮೆ ಹಣದಲ್ಲಿ ಹಸಿವನ್ನು ನೀಗಿಸುವ, ಆಹಾರ ದೊರಕುವ ಕೇಂದ್ರವಾಗಿರುವ ಇಂದಿರಾ ಕ್ಯಾಂಟೀನ್ ಸ್ಥಾಪನೆಯಾಗಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಮರ ಫಾರೂಕ ಹುಬ್ಬಳ್ಳಿ, ವಕೀಲರು, ಕಾನೂನು ಸಲಹೆಗಾರರಾದ ಎಂ.ಬಿ. ನದಾಫ್, ಮ್ಯಾಕ್ಸಿಕ್ಯಾಬ್ ಮಾಲಕ-ಚಾಲಕರ ಸಂಘದ ಖಜಾಂಚಿ ಸಮೀರ ಜಮಾದಾರ, ವೆಲ್ಕಮ್ ಹೊಟೇಲ್ ಅಟೋ ಸ್ಟ್ಯಾಂಡ್ ಅಧ್ಯಕ್ಷ ಅಬುಬಕರ ಅಣ್ಣಿಗೇರಿ, ಗದಗ ಜಿಲ್ಲಾ ಹೂವಿನ ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ ಜಾಫರ, ಸಲೀಮ ಬಳ್ಳಾರಿ, ಮಹಮ್ಮದಅಲಿ ಅತ್ತಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.