ಚಿತ್ರದುರ್ಗ:- ಕಾಂಗ್ರೆಸ್ನೊಳಗೆ ಕ್ಷಿಪ್ರ ಕ್ರಾಂತಿ ಆಗೋದು ಶತಸಿದ್ಧ.. ಬಿಜೆಪಿ ಅಧಿಕಾರಕ್ಕೆ ಬರೋದು ನಿಜ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಡಿಸೆಂಬರ್ ಬಳಿಕ ಯಾವುದೇ ಸಂದರ್ಭದಲ್ಲೂ ಮಧ್ಯಂತರ ಚುನಾವಣೆ ಬರಬಹುದು ಎಂದು ಭವಿಷ್ಯ ನುಡಿದಿದ್ದಾರೆ.
2028ಕ್ಕೆ ವಿಧಾನಸಭೆ ಚುನಾವಣೆ ಬರುತ್ತದೆಂದು ನಾನು ಹೇಳಲ್ಲ. ಡಿಸೆಂಬರ್ ಬಳಿಕ ಯಾವುದೇ ಸಂದರ್ಭದಲ್ಲಿ ಚುನಾವಣೆ ಬರಬಹುದು. 150 ಶಾಸಕರೊಂದಿಗೆ ಬಿಜೆಪಿ ಸರ್ಕಾರ ರಚಿಸುವ ಭರವಸೆಯಿದೆ. ಕಾಂಗ್ರೆಸ್ ಸರ್ಕಾರ ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಸಿಎಂ, ಡಿಸಿಎಂ, ಉಸ್ತುವಾರಿ ಸಚಿವರಿಗೆ ಜನ ಶಾಪ ಹಾಕ್ತಿದ್ದಾರೆಂದು ಕಿಡಿ ಕಾರಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ʻಸೆಪ್ಟೆಂಬರ್ ಕ್ರಾಂತಿʼ ಭವಿಷ್ಯ ಸ್ಫೋಟಗೊಂಡಿದೆ. ಸದ್ಯ ರಾಜ್ಯ ರಾಜಕಾರಣದಲ್ಲಿ, ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಮಹತ್ವದ ಚರ್ಚೆ ಈ ಸೆಪ್ಟೆಂಬರ್ ಕ್ರಾಂತಿ. ಸೆಪ್ಟೆಂಬರ್ ಸ್ಫೋಟಕ್ಕೆ ಇನ್ನೆರಡು ತಿಂಗಳಷ್ಟೇ ಬಾಕಿ. ಹಿರಿಯ ಸಚಿವ ಕೆಎನ್ ರಾಜಣ್ಣ ನೀಡಿರುವ ಈ ಹೇಳಿಕೆ ಸದ್ಯ ರಾಜಕಾರಣದಲ್ಲಿ ನಾನಾ ಆಯಾಮದಲ್ಲಿ ವಿಶ್ಲೇಷಣೆಗೆ ಕಾರಣವಾಗ್ತಿದೆ.
ಇನ್ನೂ ಸೆಪ್ಟೆಂಬರ್ ಕ್ರಾಂತಿಗೆ ಸಚಿವರು, ಶಾಸಕರು ತಮ್ಮದೇ ಆದ ಧಾಟಿಯಲ್ಲಿ ಸಮರ್ಥನೆ ಕೊಡ್ತಿದ್ದಾರೆ. ಅಷ್ಟಕ್ಕೂ ಸೆಪ್ಟೆಂಬರ್ ಕ್ರಾಂತಿಯನ್ನು ಏನೆಲ್ಲಾ ಬದಲಾವಣೆಗಳು ಆಗಲಿದೆ ಅನ್ನೋದು ಸದ್ಯದ ಕುತೂಹಲ. ಇನ್ನು ಬಿಜೆಪಿ ನಾಯಕರು ಸೆಪ್ಟೆಂಬರ್ ಕ್ರಾಂತಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡ್ತಿದ್ದಾರೆ.